ಬೆಂಗಳೂರು: `12 ಲಕ್ಷ ಸಣ್ಣ ರೈತರು ಸೇರಿದಂತೆ ಒಟ್ಟು 17 ಲಕ್ಷ ರೈತರಿಗೆ ಒಟ್ಟು ರೂ3,987 ಕೋಟಿ ಸಾಲ ವಿತರಿಸಲಾಗಿದೆ~ ಎಂದು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಎ.ಆರ್.ಶಿವರಾಮ್ ತಿಳಿಸಿದರು.
`ಕೃಷಿ ಉದ್ದೇಶಗಳಿಗಾಗಿ 1.73 ಲಕ್ಷ ಮಹಿಳೆಯರಿಗೆ ರೂ468 ಕೋಟಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ 94 ಸಾವಿರ ಫಲಾನುಭವಿಗಳಿಗೆ ರೂ158 ಕೋಟಿ ಸಾಲ ನೀಡಲಾಗಿದೆ~ ಎಂದು ಅವರು ಇತ್ತೀಚೆಗೆ ಪತ್ರಿಕಾಗೊಷ್ಠಿಯಲ್ಲಿ ಹೇಳಿದರು.
`ಅತಿವೃಷ್ಟಿ, ಅನಾವೃಷ್ಟಿ ಕಾರಣಗಳಿಗಾಗಿ ಸಾಲ ವಸೂಲಾತಿ ಕುಂಠಿತಗೊಂಡಿದೆ. ಈ ಸಂಕಷ್ಟದಿಂದ ಪಾರಾಗಲು ಠೇವಣಿ ಸಂಗ್ರಹ, ಚಿನ್ನದ ಮೇಲೆ ಸಾಲ, ಇ- ಸ್ಟಾಂಪಿಂಗ್ ಮೊದಲಾದ ಕಾರ್ಯಚಟುವಟಿಕೆಗಳತ್ತ ಬ್ಯಾಂಕು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ~ ಎಂದು ಅವರು ನುಡಿದರು.
`ಬ್ಯಾಂಕಿನ ನೌಕರರ ಬಲ ಕುಗ್ಗಿದ್ದು, ಇರುವ ನೌಕರರಿಂದಲೇ ಹೆಚ್ಚಿನ ಪ್ರಗತಿ ಸಾಧಿಸಬೇಕಾಗಿದೆ. ರೈತರ ಮನವೊಲಿಸುವ ಮೂಲಕ ವಸೂಲಾತಿಯ ಗುರಿ ಮುಟ್ಟಲು ಉದ್ದೇಶಿಸಲಾಗಿದೆ. ರೈತರು ಸ್ವಯಂ ಪ್ರೇರಿತರಾಗಿ ಸಾಲ ಮರುಪಾವತಿ ಮಾಡಬೇಕು~ ಎಂದು ಅವರು ಮನವಿ ಮಾಡಿದರು.
ಕೃಷಿ ಯಂತ್ರೋಪಕರಣಗಳು, ಸಣ್ಣ ಸಾರಿಗೆ ಮತ್ತು ಹೈನುಗಾರಿಕೆ ಸಾಲಗಳನ್ನು ವಿಮೆಗೆ ಒಳಪಡಿಸುವುದರಿಂದ ರೈತರಿಗೆ ಒಂದೇ ಸೂರಿನಡಿ ಸಾಲ ಮತ್ತು ವಿಮಾ ಸೌಲಭ್ಯ ಸಿಗುತ್ತಿದೆ~ ಎಂದು ಅವರು ವಿವರಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಬಿ.ರಾಮಚಂದ್ರಪ್ಪ ಬೆಳ್ಳೂಡಿ, ನಿರ್ದೇಶಕರಾದ ಸಂಜಯ್ ನಾಯಕ್, ಶಂಕರಗೌಡ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ವೀರೇಶ್, ಕಾರ್ಯದರ್ಶಿ ವೈ.ಎಚ್.ಗೋಪಾಲಕೃಷ್ಣ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.