ADVERTISEMENT

ಶೀಘ್ರ ಗ್ರಾಮೀಣ ಹೊರಗುತ್ತಿಗೆ ನೀತಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

 ಬೆಂಗಳೂರು: ರಾಜ್ಯ ಸರ್ಕಾರವು ಶೀಘ್ರದಲ್ಲಿಯೇ ಹೊಸ ಗ್ರಾಮೀಣ ಹೊರಗುತ್ತಿಗೆ ನೀತಿ (ಬಿಪಿಒ) ಅನಾವರಣ ಮಾಡಲಿದೆ.

ಈ ತಿಂಗಳ 18ರಿಂದ ನಗರದಲ್ಲಿ ನಡೆಯಲಿರುವ 14ನೇ ಐ.ಟಿ ಮೇಳದ ಸಂದರ್ಭದಲ್ಲಿ ಈ ನೀತಿ ಪ್ರಕಟಗೊಳ್ಳಲಿದೆ ಎಂದು ಮಾಹಿತಿ ತಂತ್ರಜ್ಞಾನ ಪ್ರಧಾನ ಕಾರ್ಯದರ್ಶಿ ಎಂ. ಎನ್. ವಿದ್ಯಾಶಂಕರ್ ಹೇಳಿದ್ದಾರೆ.
ಐ.ಟಿ ಮೇಳ ಕುರಿತು ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ವಿಷಯ ತಿಳಿಸಿದರು.

ರಾಜ್ಯದಲ್ಲಿನ ದೊಡ್ಡ ಹೊರಗುತ್ತಿಗೆ ಸಂಸ್ಥೆಗಳ ಜತೆ ಕೆಲಸ ಮಾಡಲು ಗ್ರಾಮೀಣ ಉದ್ಯಮಿಗಳನ್ನು ಉತ್ತೇಜಿಸುವುದರ ಮೂಲಕ ಹೊರಗುತ್ತಿಗೆ ಉದ್ದಿಮೆ - ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ಈ ಹೊಸ ಹೊರಗುತ್ತಿಗೆ ಯೋಜನೆ ನೆರವಾಗುವ ನಿರೀಕ್ಷೆ ಇದೆ ಎಂದರು.

ಈಗಾಗಲೇ ರಾಜ್ಯ ಸರ್ಕಾರವು ಕನಿಷ್ಠ 100 ಮಂದಿ ಉದ್ಯೋಗಿಗಳನ್ನು ಹೊಂದಿರುವ ಪ್ರತಿಯೊಂದು ಗ್ರಾಮೀಣ ಹೊರಗುತ್ತಿಗೆ ಉದ್ಯಮಗಳಿಗೆ ರೂ  40 ಲಕ್ಷದಂತೆ ಸಬ್ಸಿಡಿ ನೀಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಉದ್ಯಮ ಉತ್ತೇಜಿಸಲು ಮತ್ತು ಉದ್ಯೋಗ ಅವಕಾಶ ಹೆಚ್ಚಿಸಲು ನೀಡಲಾಗುವ ಈ ಸಬ್ಸಿಡಿ ಪಡೆಯಲು ಈಗ ಉದ್ಯೋಗಿಗಳ ಸಂಖ್ಯೆಯ ಮಿತಿಯನ್ನು 50ಕ್ಕೆ ಇಳಿಸಲಾಗಿದೆ.

ಸದ್ಯಕ್ಕೆ ರಾಜ್ಯದಲ್ಲಿ ರಾಜ್ಯ ಸರ್ಕಾರಿ ಪ್ರಾಯೋಜಕತ್ವದ 31 ಹೊರಗುತ್ತಿಗೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 3,100 ಜನರು ಉದ್ಯೋಗ ಅವಕಾಶ ಪಡೆದುಕೊಂಡಿದ್ದಾರೆ  ಎಂದು ವಿದ್ಯಾಶಂಕರ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.