ADVERTISEMENT

ಶ್ರೀರಾಮ್ ಎನ್‌ಸಿಡಿ ಜುಲೈ 26ರಂದು

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಬೆಂಗಳೂರು: `ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪೆನಿ~ಯು ಈ ತಿಂಗಳ 26ರಂದು ರೂ1,000 ಮುಖಬೆಲೆಯ ಪರಿವರ್ತಿಸಲಾಗದ ಸಾಲಪತ್ರಗಳನ್ನು (ಎನ್‌ಸಿಡಿ) ಬಿಡುಗಡೆ ಮಾಡಲಿದೆ. ಈ ಸಾಲ ಪತ್ರಗಳ ಮೂಲಕ ಒಟ್ಟು ರೂ 600 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ರೇವಣಕರ್, `ದೇಶದ ಅತಿ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ನಮ್ಮ ಸಂಸ್ಥೆಯು ವಾಣಿಜ್ಯ ವಾಹನ ಸಾಲ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿದೆ~ ಎಂದರು.

`ಕಂಪೆನಿಯ ಸಾಲಪತ್ರಗಳಿಗೆ ಕ್ರಿಸಿಲ್‌ನ ಎಎ/ ಸ್ಥಿರ ರ‌್ಯಾಂಕಿಂಗ್‌ನಂತಹ ಹೂಡಿಕೆ ಸುರಕ್ಷತೆ ಮತ್ತು ಸಕಾಲಿಕ ಹಣಕಾಸು ಸೇವಾ ವಲಯದಲ್ಲಿ ಗರಿಷ್ಠ ಮಾನ್ಯತೆ ದೊರೆತಿದೆ~ ಎಂದು ತಿಳಿಸಿದ ಅವರು, `ಸಂಗ್ರಹವಾದ ಹಣವನ್ನು ಸಾಲ ವಿತರಣೆ, ಹೂಡಿಕೆ, ಹಾಲಿ ಸಾಲಗಳ ಮರುಪಾವತಿ, ವಾಣಿಜ್ಯ ವಹಿವಾಟು ವಿಸ್ತರಣೆಗೆ ಬಳಸಲಾಗುವುದು~ ಎಂದರು.

`ಸಾಲ ಪತ್ರಗಳ ನೀಡಿಕೆಯಲ್ಲಿ ಶೇಕಡಾ 80ರಷ್ಟನ್ನು ವೈಯಕ್ತಿಕ ಹೂಡಿಕೆದಾರರಿಗೆ ಮೀಸಲಿಟ್ಟಿದ್ದೇವೆ. ಡಿಮ್ಯಾಟ್ ಖಾತೆ ಇಲ್ಲದಿದ್ದರೂ ಸಾಲ ಪತ್ರ ಖರೀದಿ ಮಾಡಲು ಅವಕಾಶ ಇದೆ. ವೈಯಕ್ತಿಕ ಹೂಡಿಕೆದಾರರಿಗೆ ಮೂರು ವರ್ಷಗಳ ಅವಧಿಗೆ ಶೇ 11.15 ಮತ್ತು ಐದು ವರ್ಷಗಳ ಅವಧಿಗೆ ಶೇ 11.40ರ ದರದಲ್ಲಿ ಕ್ರೋಡೀಕೃತ ಬಡ್ಡಿ ನೀಡಲಾಗುವುದು. ಕಾರ್ಪೊರೇಟ್ ಹೂಡಿಕೆಗೆ ಶೇ 10.25 (ಮೂರು ವರ್ಷ) ಮತ್ತು ಶೇ 10.50ರಷ್ಟು (ಐದು ವರ್ಷ) ಬಡ್ಡಿ ದರ ನಿಗದಿ ಮಾಡಲಾಗಿದೆ~ ಎಂದು ಅವರು ತಿಳಿಸಿದರು.

 ಕಂಪೆನಿಯ ದಕ್ಷಿಣ ವಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಸುದರ್ಶನ್ ಹೊಳ್ಳ, ಜೆಎಂ ಫೈನಾನ್ಸಿಯಲ್‌ನ ಸಂಜಯ್ ದತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.