ಬೆಂಗಳೂರು: 15ನೇ ಹಣಕಾಸು ಆಯೋಗದ ವ್ಯಾಪ್ತಿ ಮತ್ತು ಉದ್ದೇಶದ ಕುರಿತು ಚರ್ಚಿಸಲು ಇದೇ 10ರಂದು ಕೇರಳ ಸರ್ಕಾರ ಆಯೋಜಿಸಿರುವ ದಕ್ಷಿಣ ರಾಜ್ಯಗಳ ಸಭೆಯಲ್ಲಿ ಕರ್ನಾಟಕ ಕೂಡಾ ಭಾಗವಹಿಸಲಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
‘ತಿರುವನಂತಪುರದಲ್ಲಿ ಈ ಸಭೆಯಲ್ಲಿ ನಡೆಯಲಿದೆ. ಅಭಿವೃದ್ಧಿ ಪಥದಲ್ಲಿರುವ ರಾಜ್ಯಗಳ ಹಿತಾಸಕ್ತಿ ಮೇಲೆ ಆಯೋಗದ ಮಾರ್ಗಸೂಚಿ ಪರಿಣಾಮ ಉಂಟು ಮಾಡಲಿದೆ. ಅದರಲ್ಲೂ ದಕ್ಷಿಣ ರಾಜ್ಯಗಳ ಮೇಲೆ ಹೆಚ್ಚಿನ ಪರಿಣಾಮ ಆಗಲಿದೆ. ಹೀಗಾಗಿ, ತಿದ್ದುಪಡಿ ಮಾಡುವಂತೆ ಒತ್ತಾಯಿಸಲಾಗುವುದು’ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
‘ದಕ್ಷಿಣ ರಾಜ್ಯಗಳ ಸಾಧನೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಮರ್ಪಕವಾಗಿ ತೆರಿಗೆ ವರಮಾನ ಹಂಚಿಕೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪ್ರತಿಪಾದಿಸಿದ್ದರು. ಕೇರಳ ಹಣಕಾಸು ಸಚಿವ ಥೋಮಸ್ ಐಸಾಕ್ ಅವರು ಸಭೆ ಆಯೋಜಿಸಲು ಇದೂ ಕಾರಣವಾಗಿದೆ.
‘ರಾಜ್ಯಗಳಲ್ಲಿರುವ ಜನಸಂಖ್ಯೆ ಆಧರಿಸಿ ಆಯೋಗ ಹಣ ಹಂಚಿಕೆ ಮಾಡಲು ಉದ್ದೇಶಿಸಿದೆ. ಈ ಹಿಂದಿನ ಎಲ್ಲ ಆಯೋಗಗಳು 1971ರ ಜನಗಣತಿ ಆಧರಿಸಿ ಹಣ ಹಂಚಿಕೆ ಮಾಡಿವೆ. ಆದರೆ, 2011ರಲ್ಲಿ ಪರಿಸ್ಥಿತಿ ಬದಲಾಗಿದೆ. ಜನಸಂಖ್ಯೆ ಆಧರಿಸಿ ಹಣ ಹಂಚಿಕೆ ಮಾಡಿದರೆ ದಕ್ಷಿಣ ರಾಜ್ಯಗಳಿಗೆ ಕಡಿಮೆ ಹಣ ಸಿಗಲಿದೆ. ಇದರಿಂದ ಅಭಿವೃದ್ಧಿ ವೇಗಕ್ಕೆ ಅಡ್ಡಿಯಾಗಲಿದೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.