ದಾವಣಗೆರೆ: ಸೋಮವಾರ ಮಂಡನೆಯಾಗುವ ಕೇಂದ್ರದ ಬಜೆಟ್ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಒತ್ತು ಸಿಗಲಿದ್ದು, ಉತ್ತಮ ಬಜೆಟ್ ನೀಡುವ ನಿರೀಕ್ಷೆ ಇದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ದಾವಣಗೆರೆಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಡಬ್ಬಲ್ ಎಂಜಿನ್ ಇದ್ದಂತೆ ಎಂದು ಅಮಿತ್ ಶಾ ಹೇಳಿದ್ದಾರೆ. ಒಳ್ಳೆಯ ಕೃಷಿ ಬಜೆಟ್ ನೀಡುತ್ತಾರೆ ಎನ್ನುವ ನಿರೀಕ್ಷೆ ಇದೆ. ವಿಶೇಷವಾಗಿ ಕೃಷಿ ವಲಯ ಹಾಗೂ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡುವ ವಿಶ್ವಾಸವಿದೆ. ಕೃಷಿ ಕ್ಷೇತ್ರಕ್ಕೆ ಏನೇನು ಬೇಡಿಕೆಗಳಿವೆ ಎಂಬುದನ್ನು ನಾವು ಈಗಾಗಲೇ ನೀಡಿದ್ದೇವೆ. ಈ ಬಾರಿ ಕೃಷಿಗೆ ಪ್ರತ್ಯೇಕ ಬಜೆಟ್ ಇಲ್ಲ’ ಎಂದರು.
‘ಯುಗಾದಿ ಹಬ್ಬದ ವೇಳೆಗೆ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ ‘ಯತ್ನಾಳ್ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ತೋಳ ಬಂತು ತೋಳ ಎನ್ನುವ ಹಾಗೇ ಮಾತಾಡ್ತಾರೆ. ‘ನಾಳೆ ಬಾ ಅನ್ನೋ ಬೋರ್ಡ್ ಹಾಕೋ ಹಾಗೇ’ ಯತ್ನಾಳ್ ಮಾತು ಕೂಡ. ಅವರ ಮಾತಿಗೆ ಅಷ್ಟೊಂದು ಅವಶ್ಯಕತೆ ಇಲ್ಲ. ಎರಡೂವರೆ ವರ್ಷ ಯಾವುದೇ ಬದಲಾವಣೆ ಇಲ್ಲ ಎಂದು ಅಮಿತ್ ಶಾ ಅವರು ಈಗಾಗಲೇ ಸ್ಪಷ್ಟಪಡಿಸಿದ್ದು, ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ’ ಎಂದರು.
ರಾಬರ್ಟ್ ಚಲನಚಿತ್ರ ಬಿಡುಗಡೆ ಗೊಂದಲಕ್ಕೆ ಪ್ರತಿಕ್ರಿಯಿಸಿ, ‘ರಾಬರ್ಟ್ ಚಿತ್ರ ಬಿಡುಗಡೆ ಇದ್ದಾಗ ಆಂಧ್ರಪ್ರದೇಶದಲ್ಲಿ ದೊಡ್ಡ ನಟರ ಸಿನಿಮಾಗಳ ಬಿಡುಗಡೆ ಇದ್ದವು. ಹಾಗಾಗಿ ಚಿತ್ರಮಂದಿರ ನೀಡಿಲ್ಲ. ಈಗಾಗಲೇ ಫಿಲ್ಮ್ ಚೇಂಬರ್ಗೆ ದೂರು ಸಹ ನೀಡಿದ್ದು, ಸಮಸ್ಯೆಯನ್ನು ಬಗೆಹರಿಸುತ್ತಾರೆ. ಒಳ್ಳೆ ಚಿತ್ರ ಇದ್ರೆ. ಎಲ್ಲಾದ್ರೂ ನೋಡೇ ನೋಡ್ತಾರೆ’ ಎಂದರು.
ಕಾಂಗ್ರೆಸ್ ಬಿಟ್ಟುಹೋದವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ ಎಂಬ ಎಚ್.ಕೆ.ಪಾಟೀಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.