ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: 'ಹೊಸ ವರ್ಷದ ಮೊದಲ ಅಧಿವೇಶನ ಮಾರ್ಚ್ 3ರಂದು ಆರಂಭವಾಗಲಿದೆ. 7ರಂದು ಬಜೆಟ್ ಮಂಡಿಸಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, 'ಮೊದಲ ದಿನ ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ. ಬಳಿಕ ಅವರ ಭಾಷಣದ ಮೇಲೆ ಚರ್ಚೆ ಇರುತ್ತದೆ' ಎಂದರು.
'ಎಷ್ಟು ದಿನ ಅಧಿವೇಶನ ನಡೆಸಬೇಕು ಅನ್ನೋದನ್ನು ಕಲಾಪ ಸಲಹಾ ಸಮಿತಿ ( ಬಿಎಸಿ) ನಿರ್ಧಾರ ಮಾಡಲಿದೆ. ನನಗೆ ಕಾಲು ನೋವು ಇದ್ದರೂ ಮನೆಯಲ್ಲಿ ಕುಳಿತು ಇಲಾಖೆಗಳ ಸಭೆ ನಡೆಸಿದ್ದೇನೆ. ಇಂದು ರೈತ ಮುಖಂಡರ ಸಭೆ ಮಾಡಿದ್ದೇನೆ ಎಂದರು.
'ಬಜೆಟ್ ಮಾಡುವಾಗ ನಮ್ಮ ಇತಿಮಿತಿಯಲ್ಲಿ ಏನು ಸೇರಿಸಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ನಮ್ಮ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಹಿಂದೆ ಬಿದ್ದಿಲ್ಲ. ಕೃಷಿಕರಿಗೆ ಪೂರಕವಾಗಿ ಇರುತ್ತೇನೆ ಎಂಬ ಮಾತು ಕೊಡುತ್ತೇನೆ. ಬೆಲೆ ಏರಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಮಾಡಬೇಕು. ರಾಜ್ಯ ಸರ್ಕಾರದ ಕಡೆಯಿಂದ ಬೆಲೆ ಏರಿಕೆ ನಿಯಂತ್ರಿಸಲು ಏನು ಮಾಡಬೇಕೊ ಅದು ಮಾಡುತ್ತೇವೆ. ಕೇಂದ್ರ ಸರ್ಕಾರ ಕೂಡಾ ಬೆಲೆ ಏರಿಕೆ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.