ADVERTISEMENT

Budget | ಸುಳ್ಳು ಭರವಸೆಗಳ ಬಜೆಟ್ ಮೂಲಕ ಜನರನ್ನು ವಂಚಿಸುವ ಪ್ರಯತ್ನ: ನಳಿನ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2023, 13:07 IST
Last Updated 7 ಜುಲೈ 2023, 13:07 IST
ನಳಿನ್‌ಕುಮಾರ್ ಕಟೀಲ್‌
ನಳಿನ್‌ಕುಮಾರ್ ಕಟೀಲ್‌   

ಮಂಗಳೂರು: ಗ್ಯಾರಂಟಿ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸದೆ ರಾಜ್ಯದ ಜನತೆಯನ್ನು ವಂಚಿಸಿದ ಕಾಂಗ್ರೆಸ್ ಸರ್ಕಾರ ಈಗ ಸುಳ್ಳು ಭರವಸೆಗಳ ಬಜೆಟ್ ಮಂಡಿಸಿ ಮತ್ತೆ ಜನರ ವಂಚಿಸಲು ಪ್ರಯತ್ನಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.

ಗ್ಯಾರಂಟಿಗಳ ಜಾರಿಗೆ ₹ 57,910 ಕೋಟಿ ವೆಚ್ಚ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಆದರೆ, ಆದಾಯ ಸಂಗ್ರಹದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ನಿರುದ್ಯೋಗಿ ಪದವೀಧರರಿಗೆ ಮಾಸಿಕ ಭತ್ಯೆ ನೀಡುವುದಾಗಿ ಘೋಷಿಸಿದ್ದರೂ, ಬಜೆಟ್‌ನಲ್ಲಿ ಇದರ ವೆಚ್ಚದ ಉಲ್ಲೇಖವಿಲ್ಲ. ಒಟ್ಟಿನಲ್ಲಿ ಬಜೆಟ್ ಸುಳ್ಳು ಭರವಸೆಗಳ ಕಂತೆಯಾಗಿದೆ. ಸರ್ವರಿಗೂ ಸಮಪಾಲು ಹಾಗೂ ಸಮಬಾಳು ಸರ್ಕಾರದ ನೀತಿಯಾಗಿರಬೇಕು. ಆದರೆ, ಸಿದ್ದರಾಮಯ್ಯ ಅವರು ಬಜೆಟ್‌ನಲ್ಲೂ ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಅನುಸರಿಸಿದ್ದಾರೆ. ಬಹುಸಂಖ್ಯಾತರ ಹಿತವನ್ನು ಈ ಬಜೆಟ್ ಕಡೆಗಣಿಸಿದೆ. ನೋಂದಣಿ ಮತ್ತು ಮುದ್ರಾಂಕ ದರ ಹೆಚ್ಚಳ, ವಾಹನಗಳ ತೆರಿಗೆ ಹೆಚ್ಚಳ ಭವಿಷ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ನಳಿನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT