
ಹಣಕಾಸು ಬಜೆಟ್ ಮಂಡಿಸಲು ಶನಿವಾರ ನವದೆಹಲಿಯ ಸಂಸತ್ ಭವನಕ್ಕೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧುಬನಿ ಸೀರೆ ಧರಿಸಿ ಗಮನಸೆಳೆದರು
–ಪಿಟಿಐ ಚಿತ್ರ
ಪಟ್ನಾ: ಮಧುಬನಿ ಪೇಟಿಂಗ್ನಿಂದ ರಚಿಸಿದ ಸೀರೆಯನ್ನು ಉಟ್ಟು ಬಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹಣಕಾಸು ಬಜೆಟ್ ಮಂಡಿಸಿದರು. ಸಚಿವರಿಗೆ ಇದನ್ನು ಉಡುಗೊರೆಯಾಗಿ ನೀಡಿದ ಪದ್ಮಶ್ರೀ ಪುರಸ್ಕೃತೆ ದುಲಾರಿ ದೇವಿ ಅವರು, ‘ಕೊನೆಗೂ ಕನಸು ನನಸಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಅವರು ಮೀನಿನ ರಚನೆಯ ಎಂಬ್ರಾಯಿಡಿರಿ ಹಾಗೂ ಚಿನ್ನದ ಅಂಚು ಹೊಂದಿದ ಕೆನೆಬಣ್ಣದ ಸೀರೆ, ಕೆಂಪುಬಣ್ಣದ ರವಿಕೆ ಧರಿಸಿ ಬಂದಿದ್ದರು.
'ನಾನು ಅವರಿಗೆ ಉಡುಗೊರೆಯಾಗಿ ನೀಡಿದ ಸೀರೆಯನ್ನು ಧರಿಸುವ ಮೂಲಕ ಸಚಿವರು ಮಧುಬನಿ ಕಲೆಗೆ ಗೌರವ ಸಲ್ಲಿಸಿದ್ದಾರೆ. ಎರಡು ತಿಂಗಳ ಹಿಂದೆ ಮಧುಬನಿಯ ಮಿಥಿಲಾ ಆರ್ಟ್ ಇನ್ಸ್ಟಿಟ್ಯೂಟ್ಗೆ ಅವರು ಭೇಟಿ ನೀಡಿದ್ದ ವೇಳೆ ಸೀರೆ ನೀಡಿದ್ದೆ. ಬಜೆಟ್ ದಿನದಂದು ಅದನ್ನು ಧರಿಸುವಂತೆ ಮನವಿ ಮಾಡಿದ್ದಕ್ಕೆ ಒಪ್ಪಿಗೆ ನೀಡಿದ್ದರು. ನನ್ನ ಪಾಲಿನ ಕನಸು ನನಸಾಗಿದೆ’ ಎಂದು ಅವರು ತಿಳಿಸಿದರು.
ಈ ಸೀರೆ ತಯಾರಿಸಲು ದುಲಾರಿ ಅವರು ಒಂದು ತಿಂಗಳ ಕಾಲ ಸಮಯ ತೆಗೆದುಕೊಂಡಿದ್ದರು. ಅವರು ಮಧುಬನಿ ಪೇಟಿಂಗ್ನ ‘ಕಚ್ನಿ’ ಹಾಗೂ ಭರ್ಣಿ’ ಶೈಲಿಯಲ್ಲಿ ನೈಪುಣ್ಯತೆ ಹೊಂದಿದ್ದಾರೆ.
ದೇವಿ ಅವರ ಕಲೆ ಆಧರಿಸಿ ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿಯೂ ಬೋಧಿಸಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಕಟ್ಟಡಗಳಲ್ಲಿ ಮಧುಬನಿಯ ಪೇಟಿಂಗ್ ಬರೆದಿದ್ದಾರೆ. ಈ ಕಲೆಯ ಕುರಿತಾಗಿ ಮಕ್ಕಳಿಗೂ ಕಲಿಸಿಕೊಡುತ್ತಿದ್ದಾರೆ. ಮಧುಬನಿಯಲ್ಲಿರುವ ಮಿಥಿಲಾ ಆರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಬೋಧಕರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.