ನವದೆಹಲಿ: ಈ ಬಾರಿಯ ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ನೀಡುವ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಸರ್ಕಾರದ ವಿವಿಧ ಇಲಾಖೆಗಳು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಹಣಕಾಸು ಸಚಿವಾಲಯವು ಪರಿಶೀಲಿಸುತ್ತಿದ್ದು, ಆ ಕುರಿತು ಬಜೆಟ್ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರಿಂದ ಮಧ್ಯಮ ವರ್ಗದವರಿಗೆ ಹೆಚ್ಚಿನ ಪ್ರಯೋಜನ ಲಭಿಸಬಹುದು ಎಂದು ತಿಳಿಸಿವೆ.
ಕೇಂದ್ರ ಸರ್ಕಾರವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2014ರ ಬಳಿಕ ಹೆಚ್ಚಳ ಮಾಡಿಲ್ಲ. ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತವು 2019ರಿಂದಲೂ ₹ 50 ಸಾವಿರದಲ್ಲಿಯೇ ಇದೆ.
ಹಣದುಬ್ಬರದಲ್ಲಿ ಆಗಿರುವ ಏರಿಕೆ ಪ್ರಮಾಣಕ್ಕೆ ಸರಿಹೊಂದಿಸಲು ಈ ಬಾರಿಯ ಬಜೆಟ್ನಲ್ಲಿ, ವೇತನ ಪಡೆಯುವ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್ ವಿನಾಯಿತಿ ಮಿತಿಯನ್ನು ಹೆಚ್ಚಿಸಬೇಕು ಎನ್ನುವುದು ಹಲವು ತಜ್ಞರ
ಅಭಿಪ್ರಾಯವಾಗಿದೆ.
ಮಧ್ಯಮ ವರ್ಗದ ಜನರು ಎದುರಿಸುತ್ತಿರುವ ಒತ್ತಡದ ಅರಿವಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಚೆಗಷ್ಟೇ ಹೇಳಿದ್ದಾರೆ. ಹೀಗಾಗಿ ಬಜೆಟ್ನಲ್ಲಿ ಮಧ್ಯಮ ವರ್ಗದ ಪಾಲಿಗೆ ಕೆಲವು ಉತ್ತೇಜಕ ನಿರ್ಧಾರಗಳು ಹೊರಬೀಳುವ ಭರವಸೆ ಮೂಡಿದೆ.
‘ನಾನೂ ಮಧ್ಯಮ ವರ್ಗಕ್ಕೆ ಸೇರಿದವಳು. ಹೀಗಾಗಿ ಮಧ್ಯಮ ವರ್ಗದ ಒತ್ತಡಗಳನ್ನು ಅರ್ಥಮಾಡಿಕೊಳ್ಳಬಲ್ಲೆ’ ಎಂದು ನಿರ್ಮಲಾ ಈಚೆಗೆ ಹೇಳಿದ್ದಾರೆ.
ಜೀವ ವಿಮೆ, ಎಫ್.ಡಿ, ಬಾಂಡ್ಗಳು, ಪಿಪಿಎಫ್ ಒಳಗೊಂಡು 80 ಸಿ ಅಡಿಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಕುರಿತಾಗಿಯೂ ಸಚಿವಾಲಯವು ಆಲೋಚನೆ ನಡೆಸುತ್ತಿದೆ.
ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆರಂಭಿಸಿರುವ ಮಧ್ಯಮ ವರ್ಗದ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಂಡವಾಳ ಗಳಿಕೆ ತೆರಿಗೆ ನಿಯಮಗಳನ್ನು ಸರಳಗೊಳಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.