ನವದೆಹಲಿ: ಕೇಂದ್ರ ಸರ್ಕಾರ ತನ್ನ ಒಡೆತನದ ಭಾರತೀಯ ಜೀವ ವಿಮಾ ನಿಗಮದಲ್ಲಿನ (ಎಲ್ಐಸಿ) ಷೇರು ವಿಕ್ರಯಕ್ಕೆ ತೀರ್ಮಾನಿಸಿದೆ. ಎಲ್ಐಸಿಯಲ್ಲಿ ಹೊಂದಿರುವ ಕೆಲ ಷೇರುಗಳನ್ನು ಮಾರಾಟ ಮಾಡುವುದಾಗಿ ಹಣಕಾಸು ಸಚಿವೆ ಶನಿವಾರ ಘೋಷಿಸಿದ್ದಾರೆ.
ಬರುವ ಏಪ್ರಿಲ್ನಿಂದ ಷೇರು ವಿನಿಮಯ ಕೇಂದ್ರಗಳಲ್ಲಿ ಎಲ್ಐಸಿಯ ಲಿಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಪ್ರಾರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಈ ಷೇರುಗಳ ವಿಕ್ರಯಕ್ಕೆ ಸರ್ಕಾರ ಮುಂದಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಬೃಹತ್ ಮೊತ್ತದ ಐಪಿಒ ಎನಿಸಲಿದೆ.
1956ರಲ್ಲಿ ಸ್ಥಾಪನೆಗೊಂಡಿರುವ ಎಲ್ಐಸಿಯಲ್ಲಿ ಸರ್ಕಾರ ಶೇ 100ರಷ್ಟು ಪಾಲನ್ನು ಹೊಂದಿದೆ. ‘ಎಲ್ಐಸಿ ಮೌಲ್ಯವನ್ನು ₹10ಲಕ್ಷ ಕೋಟಿ ಎಂದು ಅಂದಾಜಿಸಬಹುದು. ಇದರಲ್ಲಿ ಶೇಕಡ 5ರಷ್ಟು ಷೇರು ವಿಕ್ರಯ ಮಾಡಿದರೂ ಸರ್ಕಾರಕ್ಕೆ ₹50 ಸಾವಿರ ಕೋಟಿ ದೊರೆಯಲಿದೆ. ಇದರಿಂದ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಲು ಅನುಕೂಲವಾಗಬಹುದು’ ಎಂದು ಸ್ಯಾಮ್ಕೊ ಸೆಕ್ಯೂರಿಟಿಸ್ನ ಸಿಇಒ ಜಿಮೀತ್ ಮೋದಿ ವಿಶ್ಲೇಷಿಸಿದ್ದಾರೆ.
ತೆರಿಗೆ ವ್ಯಾಜ್ಯ ಇತ್ಯರ್ಥಕ್ಕೆ ಯೋಜನೆ
ನೇರ ತೆರಿಗೆ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ‘ವಿವಾದ್ ಸೆ ವಿಶ್ವಾಸ್’ ಯೋಜನೆಯನ್ನು ಘೋಷಿಸಲಾಗಿದೆ.ಸದ್ಯ, 4.83 ಲಕ್ಷ ನೇರ ತೆರಿಗೆ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಹೊಸ ಯೋಜನೆಯಲ್ಲಿ ತೆರಿಗೆದಾರರು 2020ರ ಮಾರ್ಚ್ 31ರ ಒಳಗಾಗಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸಿದರೆ, ಬಡ್ಡಿದರ ಮತ್ತು ದಂಡದಿಂದ ವಿನಾಯ್ತಿ ಪಡೆಯಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.