ಡಾ. ಬಿ.ಎಚ್.ನಾಗೂರ
ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಒಳಗೊಂಡ ಕಿತ್ತೂರು ಕರ್ನಾಟಕ ಪ್ರದೇಶವು ಪ್ರಸಕ್ತ ಬಜೆಟ್ನಲ್ಲಿ ಆಗುವ ಘೋಷಣೆಗಳ ಬಗ್ಗೆ ಹಲವು ನಿರೀಕ್ಷೆಗಳನ್ನು ಹೊಂದಿತ್ತು. ಕೃಷ್ಣ ಮೇಲ್ದಂಡೆ ಯೋಜನೆ–3ನೇ ಹಂತಕ್ಕೆ ₹ 50 ಸಾವಿರ ಕೋಟಿ, ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಲು ಹೆಚ್ಚಿನ ಅನುದಾನ, ಧಾರವಾಡ–ಕಿತ್ತೂರು–ಬೆಳಗಾವಿ ಮತ್ತು ಗದಗ–ಯಲವಿಗಿ ರೈಲು ಮಾರ್ಗಕ್ಕೆ ಅನುದಾನ, ವಿಜಯಪುರ ಮತ್ತು ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಆರ್ಥಿಕ ನೆರವು ಸಿಗುವ ನಿರೀಕ್ಷೆ ಇತ್ತು.
ಕೃಷ್ಣ ಏತ ನೀರಾವರಿ ಯೋಜನೆಗೆ ₹ 3,771 ಕೋಟಿ, ಕಿತ್ತೂರು ಕರ್ನಾಟಕ ಭಾಗದಲ್ಲಿ ಒಂದು ಜವಳಿ ಪಾರ್ಕ್, ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ, ಕೇಂದ್ರ–ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಬೆಂಗಳೂರು–ಮುಂಬೈ ಎಕನಾಮಿಕ್ ಕಾರಿಡಾರ್ ಯೋಜನೆಯಡಿ ಧಾರವಾಡ ಬಳಿ 6 ಸಾವಿರ ಎಕರೆ ಜಮೀನಿನಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಒತ್ತು ನೀಡುವ ಸಂಬಂಧ ಕೈಗಾರಿಕಾ ಜಾಲಘಟಕ, ಹುಬ್ಬಳ್ಳಿಯಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ, ಬಸವನಬಾಗೇವಾಡಿಯಲ್ಲಿ ಬಸವ ಅಭಿವೃದ್ಧಿ ಪ್ರಾಧಿಕಾರ, ಸವದತ್ತಿಯ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚನೆ, ಗದಗ ಜಿಲ್ಲೆಯ ಕಪ್ಪತಗುಡ್ಡದ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ, ಧಾರವಾಡ ವಾಲ್ಮಿ ಉನ್ನತೀಕರಣ ಮತ್ತು ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಯೋಜನೆಗೆ ಬಜೆಟ್ನಲ್ಲಿ ಆದ್ಯತೆ ಸಿಕ್ಕಿದೆ.
ಪ್ರಾದೇಶಿಕ ಅಸಮತೋಲನ ನಿವಾರಿಸಲು ಬೆಂಗಳೂರಿನ ಅಭಿವೃದ್ಧಿಯಂತೆ ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ–ಧಾರವಾಡ, ಬೆಳಗಾವಿಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬೇಕಿದೆ. ಇದಕ್ಕಾಗಿ ಬೃಹತ್ ಯೋಜನೆಗಳು ಬೇಕು. ಈ ಭಾಗದ ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರವು ಮೊದಲ ಆದ್ಯತೆ ನೀಡಬೇಕಿತ್ತು.
–ಡಾ. ಬಿ.ಎಚ್.ನಾಗೂರ, ಅರ್ಥಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.