ನವದೆಹಲಿ: ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಸಂಕಲ್ಪ ಈಡೇರಿಸುವ ನಿಟ್ಟಿನಲ್ಲಿ ಅಮೃತಕಾಲದ ಮೊದಲ ಬಜೆಟ್ ಅಡಿಪಾಯ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾಲಿನ ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಅವಕಾಶ ವಂಚಿತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದು ರೈತರು, ಮಧ್ಯಮ ವರ್ಗದವರು ಮತ್ತು ಭವಿಷ್ಯದ ಕುರಿತು ಆಕಾಂಕ್ಷೆಗಳನ್ನು ಹೊಂದಿರುವ ವರ್ಗದ ಕನಸುಗಳನ್ನು ಸಾಕಾರಗೊಳಿಸಲಿದೆ ಎಂದು ಹೇಳಿದರು.
ಅಭಿವೃದ್ಧಿ ಹೊಂದಿದ, ಸಂಮೃದ್ಧ ಭಾರತ ಕಟ್ಟುವ ಕನಸು ನನಸಾಗಿಸಲು ಮಧ್ಯಮ ವರ್ಗವೇ ಅತಿ ದೊಡ್ಡ ಶಕ್ತಿ. ಆ ವರ್ಗವನ್ನು ಬಲಗೊಳಿಸಲು ನಮ್ಮ ಸರ್ಕಾರ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.
ಬಜೆಟ್ನ ಹಲವು ಅಂಶಗಳನ್ನು ಪ್ರಸ್ತಾಪಿಸಿದ ಅವರು, ಡಿಜಿಟಲ್ ಪಾವತಿಯ ಯಶಸ್ಸು ಕೃಷಿ ವಲಯದಲ್ಲೂ ಪ್ರತಿಫಲಿಸಬೇಕು. ಇದಕ್ಕಾಗಿ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೆ ಸಹಕಾರ ಸಂಘಗಳೇ ಕೇಂದ್ರಗಳಾಗಿರುತ್ತವೆ ಎಂದರು.
ಮೂಲಭೂತ ಸೌಕರ್ಯಕ್ಕೆ ₹10 ಲಕ್ಷ ಕೋಟಿ ಬಂಡವಾಳ ಘೋಷಿಸಿರುವುದು ಅಭಿವೃದ್ಧಿಗೆ ವೇಗ ಮತ್ತು ಹೊಸ ಶಕ್ತಿ ತುಂಬಲಿದೆ ಎಂದರು.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.