ನವದೆಹಲಿ: ಕೋವಿಡ್–19 ಸಾಂಕ್ರಾಮಿಕದಿಂದಾಗಿ ತತ್ತರಿಸಿರುವ ದೇಶದ ಅರ್ಥವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ಮಹತ್ವದ ಹೊಣೆ ಹೊತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯೋಗ ಸೃಷ್ಟಿಗೆ ದಾರಿಯಾಗುವ ಮೂಲ ಸೌಕರ್ಯ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸಿ ಸೋಮವಾರ ಲೋಕಸಭೆಯಲ್ಲಿ 2021–22ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಒಟ್ಟು ಆರು ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಆರ್ಥಿಕತೆಯನ್ನು ಸರಿದಾರಿಗೆ ತರುವ ಮುನ್ನೋಟವನ್ನು ದೇಶದ ಮುಂದಿರಿಸಿದ್ದಾರೆ.
ಆರೋಗ್ಯ ಕ್ಷೇತ್ರದ ಮೇಲೆ ಗಣನೀಯ ಮೊತ್ತವನ್ನು ವೆಚ್ಚ ಮಾಡಬೇಕಾದ ಅನಿವಾರ್ಯವನ್ನು ಕೋವಿಡ್–19 ಮನದಟ್ಟು ಮಾಡಿದೆ. ಹಾಗಾಗಿಯೇ, ಆರೋಗ್ಯ ಕ್ಷೇತ್ರದ ಮೇಲೆಒಟ್ಟು ₹ 2.23 ಲಕ್ಷ ಕೋಟಿ ವೆಚ್ಚ ಮಾಡುವುದಾಗಿ ನಿರ್ಮಲಾ ಅವರು ಬಜೆಟ್ನಲ್ಲಿ ಭರವಸೆ ನೀಡಿದ್ದಾರೆ.ಕಳೆದ ವರ್ಷ ಈ ವಲಯದಲ್ಲಿ ಸರ್ಕಾರ ಮಾಡಿದ್ದ ವೆಚ್ಚಕ್ಕೆ ಹೋಲಿಸಿದರೆ ಇದು ಶೇಕಡ 137ರಷ್ಟು ಜಾಸ್ತಿ.
ಉದ್ಯೋಗ ಸೃಷ್ಟಿಗೆ ಇರುವ ಬಹುದೊಡ್ಡ ಅಸ್ತ್ರ ಎಂದು ಅರ್ಥಶಾಸ್ತ್ರಜ್ಞರು ಮತ್ತೆ ಮತ್ತೆ ಹೇಳಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಈ ಬಜೆಟ್ನಲ್ಲಿ ಪ್ರಾಧಾನ್ಯ ಪಡೆದಿವೆ. 2021–22ರಲ್ಲಿ ಕೇಂದ್ರ ಸರ್ಕಾರದ ಒಟ್ಟು ಬಂಡವಾಳ ವೆಚ್ಚವು
ಒಟ್ಟು ₹ 5.54 ಲಕ್ಷ ಕೋಟಿ ಆಗಿರಲಿದೆ. ‘ಇದು 2020–21ರ ಬಜೆಟ್ಗೆ ಹೋಲಿಸಿದರೆ ಶೇ 34.5ರಷ್ಟು ಜಾಸ್ತಿ’ ಎಂದು ನಿರ್ಮಲಾ ಅವರು ಹೇಳಿದ್ದಾರೆ.
ಇವುಗಳನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.