ಬೆಂಗಳೂರು: ಲೋಕಸಭಾ ಚುನಾವಣೆ ವರ್ಷವಾದರೂ ಉಚಿತ ಗ್ಯಾರಂಟಿಗಳ ಗೋಜಿಗೆ ಹೋಗದೆ ವಾಸ್ತವಾಂಶದ ಆಧಾರದ ಮೇಲೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ.
ಬಜೆಟ್ನಲ್ಲಿ ಮತದಾರರ ಓಲೈಕೆಯ ಪ್ರಯತ್ನ ಇಲ್ಲ. ಉಚಿತ, ಖಚಿತ, ಜನಪ್ರಿಯ ಎಂಬ ಪದಗಳು ದೂರ ಉಳಿದಿವೆ. ಒಟ್ಟಾರೆಯಾಗಿ ವಿತ್ತೀಯ ಕೊರತೆ ನಡುವೆ ಅಭಿವೃದ್ಧಿಯ ವೇಗ ಹೆಚ್ಚಿಸಲು ಹಣಕಾಸು ಸಚಿವರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ ಪ್ರಕಾರ ವಿತ್ತೀಯ ಕೊರತೆಯು ಶೇ 3ಕ್ಕಿಂತ ಹೆಚ್ಚಿಗೆ ಇರಬಾರದು. ಆದರೆ, ಸರ್ಕಾರದ ಆದಾಯ ಮತ್ತು ವೆಚ್ಚಗಳ ನಡುವಿನ ವಿತ್ತೀಯ ಕೊರತೆಯು 2023-24ನೇ ಸಾಲಿನಲ್ಲಿ ಜಿಡಿಪಿಯ ಶೇ 5.8 ರಷ್ಟಿದೆ. 2024-25ನೇ ಸಾಲಿನಲ್ಲಿ ವಿತ್ತೀಯ ಕೊರತೆಯು ಶೇ 5.1ರಷ್ಟು ಇರಲಿದ್ದು, 2025-26ನೇ ಸಾಲಿನ ವೇಳೆಗೆ ಆದಾಯ ಮತ್ತು ವೆಚ್ಚದ ನಡುವಿನ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.5ಕ್ಕೆ ತಗ್ಗಿಸಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ.
ಸರ್ಕಾರ ಇದನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ. ಆದರೆ, ಜಗತ್ತಿನ ಪ್ರಮುಖ ದೇಶಗಳು ಶೇ 2ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಲು ಹರಸಾಹಸ ಪಡುತ್ತಿರುವಾಗ ಭಾರತದ ಜಿಡಿಪಿ ಶೇ 7ರಷ್ಟು ಗಡಿಯಲ್ಲಿರುವುದು ಆಶಾದಾಯಕವಾಗಿದೆ.
ತೆರಿಗೆದಾರರಿಗೆ ನಿರಾಸೆ: ಆದಾಯ ತೆರಿಗೆ ಇಳಿಕೆಯ ನಿರೀಕ್ಷೆಯಲ್ಲಿ ಇದ್ದವರಿಗೆ ಬಜೆಟ್ ನಿರಾಸೆ ಮೂಡಿಸಿದೆ.
ಹಣದುಬ್ಬರ ಏರಿಕೆಯಾಗಿರುವಾಗ ತೆರಿಗೆ ಸ್ಲ್ಯಾಬ್ಗಳಲ್ಲಿ ಬದಲಾವಣೆ ತರದಿದ್ದರೆ ಹೇಗೆ ಎಂಬ ಬೇಸರ ತೆರಿಗೆದಾರರಲ್ಲಿ ಮನೆ ಮಾಡಿದೆ. ಇನ್ನು ಪರೋಕ್ಷ ತೆರಿಗೆಗಳಲ್ಲೂ ಬದಲಾವಣೆ ಆಗಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸದಲ್ಲಿರುವ ಬಿಜೆಪಿ ಜನಪ್ರಿಯ ಗ್ಯಾರಂಟಿಗಳ ಮೊರೆ ಹೋಗಿಲ್ಲ. ಆರ್ಥಿಕ ಶಿಸ್ತಿನ ತಳಹದಿಯ ಮೇಲೆ ಬಜೆಟ್ ಮಂಡಿಸಲಾಗಿದೆ. ದೇಶದ ಅರ್ಥ ವ್ಯವಸ್ಥೆಯ ದೃಷ್ಟಿಕೋನದಲ್ಲಿ ನೋಡುವುದಾದರೆ ಇದೊಂದು ಉತ್ತಮ ನಡೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.