ADVERTISEMENT

ದೇಶಿ ಅಡಿಕೆಗೆ ಕುತ್ತು ತಂದ ನಕಲಿ ಅಡಿಕೆ: ಆರಗ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 20:54 IST
Last Updated 2 ಜುಲೈ 2021, 20:54 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ರಿಪ್ಪನ್‌ಪೇಟೆ: ‘ಗೋಡಂಬಿ ಹೆಸರಲ್ಲಿ ಇಂಡೋನೇಷ್ಯಾದಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಆಮದು ಮಾಡಿಕೊಂಡು ದೇಶಿ ಅಡಿಕೆ ಹೆಸರಲ್ಲಿ ಮಾರಾಟ ಮಾಡುತ್ತಿರುವ ವಂಚಕರ ಬೃಹತ್‌ ಜಾಲವು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ತೀರ್ಥಹಳ್ಳಿ ಶಾಸಕ, ಅಡಿಕೆ ಕಾರ್ಯಪಡೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡೋನೇಷ್ಯಾ ಮತ್ತು ವಿವಿಧ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಗಳನ್ನು ಆಮದು ಮಾಡಿಕೊಂಡು ಇಲ್ಲಿನ ಗುಣಮಟ್ಟದ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುವ ದೊಡ್ಡ ಜಾಲ ದೇಶದ ಎಲ್ಲೆಡೆ ವ್ಯಾಪಿಸಿದೆ. ಇದರಿಂದ ಪ್ರಾಮಾಣಿಕ ಅಡಿಕೆ ಬೆಳೆಗಾರರ ವಹಿವಾಟಿಗೂ ಕುತ್ತು ಬಂದಿದೆ’ ಎಂದು ದೂರಿದರು.

‘ಹಲವು ವರ್ಷಗಳಿಂದ ಕಸ್ಟಮ್ಸ್‌ ಆಮದು ಸುಂಕ ಪಾವತಿಸದೆ ಬಂದರಿನ ಮೂಲಕ ಅಡಿಕೆಯು ವಾಮಮಾರ್ಗದಲ್ಲಿ ಮುಂಬೈ ಸೇರಿ ದೇಶದ ಪ್ರಮುಖ ವಾಣಿಜ್ಯ ಪಟ್ಟಣಗಳಿಗೆ ಬರುತ್ತಿದೆ. ಇದು ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ’ ಎಂದರು.

ADVERTISEMENT

‘ಈಗಾಗಲೇ ₹ 16 ಸಾವಿರ ಕೋಟಿ ಸುಂಕದ ಅವ್ಯವಹಾರ ಸಂಬಂಧ ಮುಂಬೈ ಹೈಕೋರ್ಟ್‌ನ ನಾಗಪುರ ಪೀಠ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಅಲ್ಲಿಯೂ ಆರೋಪ ಸಾಬೀತಾಗಿದೆ. ಇಂತಹ ಖದೀಮರೊಂದಿಗೆ ಕೈಜೋಡಿಸಿರುವ ಭ್ರಷ್ಟ ಅಧಿಕಾರಿಗಳನ್ನು ಜೈಲಿಗಟ್ಟಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.