ನವದೆಹಲಿ: ಬೆಲೆಯನ್ನು ನಿಯಂತ್ರಿಸಲು ಮತ್ತು ದೇಶಿ ತಯಾರಕರಿಗೆ ಪೂರೈಕೆ ಹೆಚ್ಚಿಸಲು ಅನುಕೂಲ ಆಗುವಂತೆ ಹತ್ತಿ ನೂಲಿನ ರಫ್ತು ಮೇಲೆ ನಿರ್ಬಂಧ ವಿಧಿಸಿ ಎಂದು ಉಡುಪು ರಫ್ತು ಉತ್ತೇಜನಾ ಮಂಡಳಿ (ಎಇಪಿಸಿ) ಸರ್ಕಾರಕ್ಕೆ ಮನವಿ ಮಾಡಿದೆ.
‘ಹತ್ತಿ ನೂಲಿನ ದರ ತಗ್ಗಿಸಲು ಕೇಂದ್ರ ಸರ್ಕಾರ ಹಲವು ಪ್ರಯತ್ನಗಳನ್ನು ನಡೆಸಿದ ಹೊರತಾಗಿಯೂ ನಾಲ್ಕು ತಿಂಗಳಿನಿಂದ ನಿರಂತರವಾಗಿ ಏರಿಕೆಯಾಗುತ್ತಲೇ ಇದ್ದು ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಮಂಡಳಿಯ ಅಧ್ಯಕ್ಷ ಎ. ಶಕ್ತಿವೇಲು ತಿಳಿಸಿದ್ದಾರೆ
‘ದೇಶಿ ತಯಾರಕರಿಗೆ ಹತ್ತಿ ನೂಲಿನ ಪೂರೈಕೆ ಹೆಚ್ಚಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ನಾವು ಮನವಿ ಮಾಡುತ್ತೇವೆ. ಹತ್ತಿ ನೂಲಿನ ರಫ್ತಿನ ಮೇಲೆ ಪರಿಮಾಣದ ನಿರ್ಬಂಧ ವಿಧಿಸುವಂತೆ ಸಲಹೆ ನೀಡುತ್ತವೆ’ ಎಂದು ಹೇಳಿದ್ದಾರೆ.
‘ಭಾರತೀಯ ಹತ್ತಿ ನಿಗಮವು ಸಣ್ಣ ಮಿಲ್ಗಳ ಮಾಲೀಕರಿಗೆ ಹತ್ತಿಯ ಮೇಲಿನ ದರವನ್ನು ಕಡಿಮೆ ಮಾಡಿದೆಯಾದರೂ ಅದರಿಂದ ಹತ್ತಿ ನೂಲಿನ ದರದಲ್ಲಿ ಯಾವುದೇ ಇಳಿಕೆ ಆಗಿಲ್ಲ.
‘ನೂಲಿನ ದರವು ಹತ್ತಿ ದರವನ್ನೂ ಮೀರಿ ಏರಿಕೆ ಕಂಡಿದೆ. ಬೆಲೆಗಳ ನಿರಂತರ ಹೆಚ್ಚಳ ಮತ್ತು ನೂಲಿನ ಲಭ್ಯತೆಯಲ್ಲಿ ಅನಿರೀಕ್ಷಿತತೆ ಇರುವುದರಿಂದ ಉಡುಪು ರಫ್ತುದಾರರು ತಮ್ಮ ಗ್ರಾಹಕರಿಗೆ ಮಾಡಿದ ಬದ್ಧತೆಗಳನ್ನು ಕಾಯ್ದುಕೊಳ್ಳಲು ಆಗುತ್ತಿಲ್ಲ. ಹತ್ತಿ ನೂಲಿನ ರಫ್ತು ಮೇಲೆ ರಫ್ತು ಸುಂಕ ವಿಧಿಸಬೇಕು. ಇದರಿಂದಾಗಿ ದೇಶದಲ್ಲಿ ನೂಲಿನ ದರ ಇಳಿಕೆ ಆಗಲಿದೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.