ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ರಜನೀಶ್ ಕುಮಾರ್ ವಿರುದ್ಧ ಮಾಡಿರುವ ಟೀಕೆಯನ್ನು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು (ಎಐಬಿಒಸಿ) ಖಂಡಿಸಿದೆ.
ಗುವಾಹಟಿಯಲ್ಲಿ ಇತ್ತೀಚೆಗೆ ನಡೆದ ಬ್ಯಾಂಕ್ ಮುಖ್ಯಸ್ಥರ ಸಭೆಯಲ್ಲಿ ನಿರ್ಮಲಾ ಅವರು ಎಸ್ಬಿಐ ಮತ್ತು ರಜನೀಶ್ ಕುಮಾರ್ ವಿರುದ್ಧ ಮಾಡಿರುವ ಟೀಕಾಪ್ರಹಾರದ ಧ್ವನಿಸುರುಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸರ್ಕಾರಿ ಅಧಿಕಾರಿಗಳು, ಇತರ ಬ್ಯಾಂಕ್ಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಿರ್ಮಲಾ ಅವರು ರಜನೀಶ್ ಅವರ ವಿರುದ್ಧ ತೀಕ್ಷ್ಣ ಸ್ವರೂಪದ ಟೀಕೆ ಮಾಡಿದ್ದಾರೆ.
‘ಅಸ್ಸಾಂನ ಚಹಾ ತೋಟಗಳ 2.5 ಲಕ್ಷ ಕಾರ್ಮಿಕರಿಗೆ ಸಾಲ ಸೌಲಭ್ಯ ವಿತರಿಸಲು ಸಾಧ್ಯವಾಗದಿರುವುದಕ್ಕೆ ನಿಮ್ಮ ಅದಕ್ಷತೆಯೇ ಮುಖ್ಯ ಕಾರಣ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ, ಹೃದಯಹೀನ ಬ್ಯಾಂಕ್ ಆಗಿದೆ’ ಎಂದು ನಿರ್ಮಲಾ ಅವರು ರಜನೀಶ್ ವಿರುದ್ಧ ಹರಿಹಾಯ್ದಿರುವುದು ಧ್ವನಿಸುರುಳಿಯಲ್ಲಿ ಇದೆ.
‘ತಿಳಿಯಿರಿ ನಿಮ್ಮ ಗ್ರಾಹಕರನ್ನು’ (ಕೆವೈಸಿ) ನಿಯಮದ ಕಾರಣಕ್ಕೆ ಕಾರ್ಮಿಕರ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಸಾಧ್ಯವಾಗಿಲ್ಲ.
ಸಭೆಯ ವಿವರಗಳನ್ನು ಒಳಗೊಂಡ ಧ್ವನಿಸುರುಳಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಬಿಟ್ಟಿರುವುದು ಬ್ಯಾಂಕ್ನ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಕೃತ್ಯವಾಗಿದೆ. ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ವಿರುದ್ಧ ತನಿಖೆಯಾಗಬೇಕು ಎಂದು ‘ಎಐಬಿಒಸಿ’ ಒತ್ತಾಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.