ADVERTISEMENT

ಬ್ಯಾಂಕಿಂಗ್ ವಂಚನೆ: ಸಿಬಿಐ ತನಿಖೆಗೆ 5 ರಾಜ್ಯಗಳ ಹಿಂದೇಟು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 13:42 IST
Last Updated 7 ಏಪ್ರಿಲ್ 2022, 13:42 IST
   

ನವದೆಹಲಿ: ಪ್ರತಿಪಕ್ಷಗಳ ಆಡಳಿತ ಇರುವ ಐದು ರಾಜ್ಯಗಳು ಒಟ್ಟು ₹ 21,074 ಕೋಟಿ ಮೊತ್ತದ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಪ್ರಕರಣಗಳ ತನಿಖೆ ಮೂರು ವರ್ಷಗಳಿಂದ ಮುಂದಕ್ಕೆ ಸಾಗಿಲ್ಲ.

ಮಹಾರಾಷ್ಟ್ರ, ಪಂಜಾಬ್‌, ಪಶ್ಚಿಮ ಬಂಗಾಳ, ಛತ್ತೀಸಗಡ ಮತ್ತು ರಾಜಸ್ಥಾನ ರಾಜ್ಯಗಳು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಲು ಒಪ್ಪಿಗೆ ನೀಡಿಲ್ಲ.

ತನಿಖೆಗೆ ಒಪ್ಪಿಗೆ ನೀಡುವಂತೆ ಕೋರಿ 2019ರಿಂದ 2022ರ ಫೆಬ್ರುವರಿ 28ರವರೆಗೆ ಐದು ರಾಜ್ಯಗಳಿಗೆ ಸಿಬಿಐ ಒಟ್ಟು 128 ಮನವಿಗಳನ್ನು ಸಲ್ಲಿಸಿದೆ. ಅವುಗಳಿಗೆ ರಾಜ್ಯಗಳಿಂದ ಒಪ್ಪಿಗೆ ದೊರೆತಿಲ್ಲ ಎಂದು ಸಿಬ್ಬಂದಿ, ಸಾರ್ವಜನಿಕ ವ್ಯಾಜ್ಯ ಮತ್ತು ಪಿಂಚಣಿಗಳ ಸಚಿವಾಲಯವು ಈಚೆಗೆ ರಾಜ್ಯಸಭೆಗೆ ಮಾಹಿತಿ ನೀಡಿದೆ.

ADVERTISEMENT

ಮಿಜೋರಾಂ, ಕೇರಳ, ಜಾರ್ಖಂಡ್‌ ಮತ್ತು ಮೇಘಾಲಯ ರಾಜ್ಯಗಳು ಸಹ ಪ್ರಕರಣಗಳನ್ನು ಸಿಬಿಐನಿಂದ ತನಿಖೆ ನಡೆಸುವ ಸಂಬಂಧ ನೀಡಿದ್ದ ಮುಕ್ತ ಅನುಮತಿಯನ್ನು ಹಿಂಪಡೆದಿವೆ. ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಈ ರಾಜ್ಯಗಳು ಆರೋಪಿಸಿವೆ.

ಈ ರಾಜ್ಯಗಳಲ್ಲಿ ಪ್ರಕರಣದ ತನಿಖೆ ನಡೆಸಲು ಸಿಬಿಐ ಪ್ರತ್ಯೇಕವಾಗಿ ಅನುಮತಿ ಪಡೆಯುವಂತಾಗಿದೆ.

ಬ್ಯಾಂಕಿಂಗ್‌ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ತನಿಖೆಗೆ ಅನುಮತಿ ನೀಡುವಂತೆ ಸಿಬಿಐ ಅತಿ ಹೆಚ್ಚಿನ ಮನವಿ ಸಲ್ಲಿಸಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ₹ 20,312 ಕೋಟಿ ಮೊತ್ತದ ವಂಚನೆ ಪ್ರಕರಣದ ತನಿಖೆಗೆ ಒಪ್ಪಿಗೆ ನೀಡುವಂತೆ ಸಿಬಿಐ 101 ಮನವಿಗಳನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.