ADVERTISEMENT

ಚಕ್ರಬಡ್ಡಿ ಮನ್ನಾ: ಬ್ಯಾಂಕ್‌ಗಳಿಗೆ ಹೊರೆ

ರಾಯಿಟರ್ಸ್
Published 7 ಅಕ್ಟೋಬರ್ 2020, 18:07 IST
Last Updated 7 ಅಕ್ಟೋಬರ್ 2020, 18:07 IST

ಮುಂಬೈ: ₹2 ಕೋಟಿವರೆಗಿನ ನಿರ್ದಿಷ್ಟ ಬಗೆಯ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಕೇಂದ್ರ ಸರ್ಕಾರದ ತೀರ್ಮಾನವು ಅರ್ಥವ್ಯವಸ್ಥೆಗೆ ಹೆಚ್ಚಿನ ಚೈತನ್ಯವನ್ನೇನೂ ನೀಡಲಾರದು ಎಂದು ಕೆಲವು ಬ್ಯಾಂಕರ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಈ ನಡೆಯು ಬ್ಯಾಂಕುಗಳ ಪಾಲಿಗೆ ಅನಗತ್ಯ ಒತ್ತಡ ಸೃಷ್ಟಿಸಲಿದೆ, ವ್ಯಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಲಿವೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಸಾಲದ ಕಂತುಗಳ ಮರು ಪಾವತಿಗೆ ವಿನಾಯಿತಿ ನೀಡಿದ್ದ (ಮೊರಟೋರಿಯಂ) ಅವಧಿಯ ಚಕ್ರಬಡ್ಡಿಯನ್ನು ಮನ್ನಾ ಮಾಡಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಚಕ್ರಬಡ್ಡಿಯ ಮನ್ನಾದಿಂದ ಬ್ಯಾಂಕ್‌ಗಳಿಗೆ ಆಗಬಹುದಾದ ಹಣಕಾಸಿನ ಹೊರೆಯನ್ನು ತಾನೇ ಹೊತ್ತುಕೊಳ್ಳುವುದಾಗಿಯೂ ಕೇಂದ್ರ ಹೇಳಿದೆ. ಈ ಮೊತ್ತವು ಗರಿಷ್ಠ ₹ 7,300 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಆದರೆ, ಅನುತ್ಪಾದಕ ಸಾಲದ (ಎನ್‌ಪಿಎ) ಸಮಸ್ಯೆಯನ್ನು, ಕೊರೊನಾ ಕಾರಣದಿಂದಾಗಿ ಹೊಸ ಸಾಲದ ಬೇಡಿಕೆ ಕೊರತೆ ಎದುರಿಸುತ್ತಿರುವ ಬ್ಯಾಂಕುಗಳ ಪಾಲಿಗೆ ಕೇಂದ್ರದ ಈ ತೀರ್ಮಾನವು ಇನ್ನಷ್ಟು ಒತ್ತಡವನ್ನು ತಂದಿರಿಸಲಿದೆ. ರೈತರ ಸಾಲ ಮನ್ನಾ ಯೋಜನೆ ಘೋಷಿ ಸಿದ್ದಾಗ, ಕೇಂದ್ರದಿಂದ ಹಣ ಪಡೆಯಲು ಬ್ಯಾಂಕುಗಳು ಒಂಬತ್ತರಿಂದ 24 ತಿಂಗಳು ಗಳವರೆಗೆ ಕಾಯಬೇಕಾಗಿತ್ತು ಎಂದು ಬ್ಯಾಂಕಿಂಗ್‌ ವಲಯದ ಇಬ್ಬರು ಪ್ರತಿನಿಧಿಗಳು ತಿಳಿಸಿದರು.

ADVERTISEMENT

ಬ್ಯಾಂಕುಗಳು ತಾವು ನೀಡಿರುವ ಸಾಲದ ಬಡ್ಡಿ, ಚಕ್ರಬಡ್ಡಿಯ ವಿಚಾ ರವಾಗಿ ಹೊಸದಾಗಿ ಲೆಕ್ಕಾಚಾರ ಮಾಡಬೇಕಾಗುತ್ತದೆ. ‘ಸರ್ಕಾರದಿಂದ ಹಣವನ್ನು ಪಡೆದುಕೊಳ್ಳುವುದು ಕಷ್ಟದ ಕೆಲಸ’ ಎಂದು ಮೂಲಗಳು ಹೇಳುತ್ತವೆ. ‘ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಹಳಷ್ಟು ಕೆಲಸ ಮಾಡಬೇಕಾಗುತ್ತದೆ. ಅಂತಿಮವಾಗಿ, ಇದರಿಂದ ಯಾರೂ ಖುಷಿಪಡುವ ಸ್ಥಿತಿ ನಿರ್ಮಾಣವಾಗದು. ಸರ್ಕಾರವೇ ಬಡವಾಗುತ್ತದೆ’ ಎನ್ನುತ್ತವೆ ಮೂಲಗಳು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕೇಂದ್ರ ಹಣಕಾಸು ಇಲಾಖೆಯ ವಕ್ತಾರರು ನಿರಾಕರಿಸಿದ್ದಾರೆ.

ಸಾಲ ಪಡೆದವರಿಗೆ ಸಹಾಯ ಮಾಡಬೇಕು ಎಂದಿದ್ದರೆ ಸಾಲ ಮರುಹೊಂದಾಣಿಕೆ ಅಥವಾ ಸಬ್ಸಿಡಿ ನೀಡುವುದು ಒಳಿತು ಎಂದು ಕೆಲವು ಬ್ಯಾಂಕರ್‌ಗಳು ಹೇಳಿದರು. ‘ಇನ್ನು ಮುಂದೆ, ಪ್ರವಾಹ ಅಥವಾ ಆ ಬಗೆಯ ಇತರ ಸಂದರ್ಭಗಳು ಎದುರಾದಾಗ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇರುವವರೂ ಕಂತು ಪಾವತಿಸದೆ ಇರಬಹುದು. ಏಕೆಂದರೆ, ಸರ್ಕಾರ ತಮ್ಮ ನೆರವಿಗೆ ಬರುತ್ತದೆ ಎಂಬ ಖಾತರಿ ಅವರಲ್ಲಿ ಇರುತ್ತದೆ’ ಎಂದು ಒಂದು ಖಾಸಗಿ ಬ್ಯಾಂಕ್‌ನ‌ ಹಿರಿಯ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.