ಬೆಂಗಳೂರಿನಲ್ಲಿ ಬುಧವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು, ಎಫ್ಕೆಸಿಸಿಐ ಮಂಥನ್, ಎಕ್ಸ್ಪೋರ್ಟ್ ಎಕ್ಸ್ಲೆನ್ಸ್ ಪ್ರಶಸ್ತಿಯ ಲೋಗೊ ಬಿಡುಗಡೆ ಮಾಡಿದರು.
ಬೆಂಗಳೂರು: ‘ವ್ಯಾಪಾರದಲ್ಲಿ ಏಳುಬೀಳು ಸಹಜ. ಆದರೆ, ಗುರಿ ಸಾಧನೆಗೆ ದೃಢ ನಿರ್ಧಾರ, ಆತ್ಮವಿಶ್ವಾಸ ಅತಿಮುಖ್ಯ’ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ನಗರದಲ್ಲಿ ಬುಧವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ ಆಯೋಜಿಸಿದ್ದ 20ನೇ ಆವೃತ್ತಿಯ ರಫ್ತು ಶ್ರೇಷ್ಠತಾ ಪ್ರಶಸ್ತಿ (ಎಕ್ಸ್ಪೋರ್ಟ್ ಎಕ್ಸ್ಲೆನ್ಸ್ ಪ್ರಶಸ್ತಿ) ಮತ್ತು 17ನೇ ಆವೃತ್ತಿಯ ಮಂಥನ್ ಸ್ಪರ್ಧೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೋತಾಗ ಮಾತ್ರ ಗೆಲುವಿನ ಮೌಲ್ಯ ಗೊತ್ತಾಗುತ್ತದೆ. ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಪರಿಸರವು ಹೊಸ ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗಿದೆ. ಇಲ್ಲಿ ಹಲವು ಅವಕಾಶಗಳಿವೆ. 2027ರ ವೇಳೆಗೆ ದೇಶವು 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ ಎಂದು ಹೇಳಿದರು.
ಎಫ್ಕೆಸಿಸಿಐನ ಮಂಥನ್ ಕಾರ್ಯಕ್ರಮವು ಯುವಜನತೆಯು ಉದ್ಯಮಿಗಳಾಗಲು ವೇದಿಕೆ ಕಲ್ಪಿಸುತ್ತಿದೆ. ಆರ್ಥಿಕತೆ, ಶಿಕ್ಷಣ, ಇಂಧನ, ಉದ್ಯಮವು ದೇಶದ ಪ್ರಗತಿಯಲ್ಲಿ ನಿರ್ಣಾಯಕವಾಗಿವೆ ಎಂದರು.
ಕೇಂದ್ರ ಸರ್ಕಾರವು ಮುದ್ರಾ ಯೋಜನೆ ಸೇರಿ ನವೋದ್ಯಮ ಸ್ಥಾಪನೆಗೆ ಹಣಕಾಸಿನ ನೆರವು ನೀಡುತ್ತಿದೆ. ಇದನ್ನು ಯುವಜನತೆ ಸದ್ಬಳಕೆ ಮಾಡಿಕೊಂಡು ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.
ಯುವಜನರಲ್ಲಿ ಉದ್ಯಮಶೀಲತೆಯ ಬಗ್ಗೆ ಉತ್ಸಾಹ ಹೆಚ್ಚಿಸಲು ಮಂಥನ್ ಕಾರ್ಯಕ್ರಮದ 17ನೇ ಆವೃತ್ತಿಗೆ ಚಾಲನೆ ನೀಡಲಾಗಿದೆ ಎಂದು ಮಂಥನ್ ಕಾರ್ಯಕ್ರಮದ ಅಧ್ಯಕ್ಷೆ ತೇಜಶ್ರೀ ಬಿ.ಎ. ಹೇಳಿದರು.
ಮಂಥನ್ ಎನ್ನುವುದು ಬ್ಯುಸಿನೆಸ್ ಪ್ಲಾನ್ ಅನ್ನು ಪ್ರಸ್ತುತಪಡಿಸುವ ಸ್ಪರ್ಧೆಯಾಗಿದೆ. ರಾಜ್ಯದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮೊ ವಿದ್ಯಾರ್ಥಿಗಳು ತಮ್ಮಲ್ಲಿನ ಹೊಸ ಬ್ಯುಸಿನೆಸ್ಗೆ ಸಂಬಂಧಿಸಿದ ಆಲೋಚನೆಗಳನ್ನು ಎಫ್ಕೆಸಿಸಿಐ ವೆಬ್ಸೈಟ್ನಲ್ಲಿ ದಾಖಲಿಸಬೇಕು. ಉತ್ತಮ ಪ್ಲಾನ್ಗಳಿಗೆ ₹10 ಲಕ್ಷದವರೆಗೆ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಮಹಿಳೆಯರ ಆಲೋಚನೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ಹಿರಿಯ ಉಪಾಧ್ಯಕ್ಷೆ ಉಮಾ ರೆಡ್ಡಿ, ಉಪಾಧ್ಯಕ್ಷ ಟಿ. ಸಾಯಿ ರಾಮ್ ಪ್ರಸಾದ್, ಮಾಜಿ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ರಫ್ತು ಶ್ರೇಷ್ಠತಾ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಬಿ.ಸಿ. ತಿಪ್ಪೇಶಪ್ಪ, ಮಂಥನ್ ಸಲಹೆಗಾರ ಐ.ಎಸ್. ಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.