ಬೆಂಗಳೂರು: ಭಾರ್ತಿ ಏರ್ಟೆಲ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಠ್ಠಲ್ ಅವರು, ಜಿಎಸ್ಎಂಎ ಮಂಡಳಿ ಅಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದಾರೆ.
ಜಿಎಸ್ಎಂಎ ನಿರ್ದೇಶಕರ ಮಂಡಳಿಯು 2026ರ ಅಂತ್ಯದವರೆಗೆ ಗೋಪಾಲ್ ವಿಠ್ಠಲ್ ಅವರನ್ನು ಆಯ್ಕೆ ಮಾಡಿದೆ. ಮಂಡಳಿಯ ಹಂಗಾಮಿ ಅಧ್ಯಕ್ಷರಾಗಿರುವ ಅವರು, ಮಂಡಳಿಯ ಕಾರ್ಯತಂತ್ರ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸುನಿಲ್ ಭಾರ್ತಿ ಮಿತ್ತಲ್ ನಂತರ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ಪ್ರತಿಷ್ಠಿತ ಈ ಸಂಸ್ಥೆಯಲ್ಲಿ ಜಗತ್ತಿನಾದ್ಯಂತ ಒಂದು ಸಾವಿರ ಟೆಲಿಕಾಂ ಕಂಪನಿಗಳು, ಹ್ಯಾಂಡ್ಸೆಟ್ ಮತ್ತು ಸಾಧನ ಕಂಪನಿಗಳು, ಸಾಫ್ಟ್ವೇರ್ ಕಂಪನಿಗಳು, ಸಲಕರಣೆ ಪೂರೈಕೆದಾರರು, ಇಂಟರ್ನೆಟ್ ಕಂಪನಿಗಳು ಮತ್ತು ಕೈಗಾರಿಕಾ ವಲಯದ ಸಂಸ್ಥೆಗಳ ಸದಸ್ಯರು ಇದ್ದಾರೆ.
‘ಜಿಎಸ್ಎಂಎ ಮಂಡಳಿ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್ ಅಧಿಕಾರ ವಹಿಸಿಕೊಂಡಿರುವುದು ನನಗೆ ಹೆಮ್ಮೆಯಾಗಿದೆ. ಮೊಬೈಲ್ ಉದ್ಯಮವು 2024ರಲ್ಲಿ ಜಾಗತಿಕ ಆರ್ಥಿಕತೆಗೆ ₹555 ಲಕ್ಷ ಕೋಟಿ ಕೊಡುಗೆ ನೀಡಿದೆ. ಜಾಗತಿಕ ಮಟ್ಟದಲ್ಲಿ ಮೊಬೈಲ್ ಉದ್ಯಮದ ಅಭಿವೃದ್ಧಿಗೆ ಸಂಸ್ಥೆಯ ಶ್ರಮಿಸಲಿದೆ. ಜಿಎಸ್ಎಂಎ ತಂಡ ಮತ್ತು ಮಂಡಳಿಯ ಉಳಿದವರೊಂದಿಗೆ ಉತ್ತಮವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಜಿಎಸ್ಎಂಎ ಮಹಾನಿರ್ದೇಶಕ ಮ್ಯಾಟ್ಸ್ ಗ್ರ್ಯಾನ್ರಿಡ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.