ಮಂಗಳೂರು: ಪಾರದರ್ಶಕವಾಗಿ ವಹಿವಾಟು ನಡೆಸುವ ಸಹಕಾರ ಸಂಘಗಳನ್ನು ಬಲಪಡಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ಕುಮಾರ್ ಕೊಡ್ಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.
‘ಎಪಿಎಂಸಿ ಶುಲ್ಕವನ್ನು ಜಿಎಸ್ಟಿಯಲ್ಲಿ ವಿಲೀನಗೊಳಿಸುವ ಮೂಲಕ ಕೃಷಿ ಉತ್ಪನ್ನಗಳು ಸಹಕಾರ ವ್ಯವಸ್ಥೆ ಅಡಿಯಲ್ಲಿ ಹೆಚ್ಚು ಮಾರಾಟ ಆಗುವಂತೆ ಕ್ರಮವಹಿಸಬೇಕು. ಇದರಿಂದ ಸಹಕಾರ ಸಂಸ್ಥೆಗಳಿಗೆ, ಕೃಷಿಕರಿಗೆ ಅನುಕೂಲವಾಗುತ್ತದೆ. ಕೆಲವು ಖಾಸಗಿ ವರ್ತಕರು ತೆರಿಗೆ ವಂಚಿಸಿ ಉತ್ಪನ್ನಗಳನ್ನು ಸಾಗಾಟ ಮಾಡುವುದರಿಂದ ಜಿಎಸ್ಟಿ ನಷ್ಟವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಉತ್ಪನ್ನ ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಿ, ಅವುಗಳ ಮೇಲೆ ನಿಗಾವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಕೆಲವು ತೋಟಗಾರಿಕಾ ಬೆಳೆಗಳಿಗೆ ಕೀಟನಾಶಕವಾಗಿ ಕಾಪರ್ ಸಲ್ಫೇಟ್ ಬಳಸಲಾಗುತ್ತದೆ. ಇದರ ಮೇಲಿನ ಶೇ 18ರ ಜಿಎಸ್ಟಿ ಹಾಗೂ ಮೈಕ್ರೊ ನ್ಯೂಟ್ರಿಯೆಂಟ್ ಮೇಲಿನ ಶೇ 18ರ ಜಿಎಸ್ಟಿಯನ್ನು ಶೇ 5ಕ್ಕೆ ಇಳಿಸಬೇಕು. ಪ್ರಸ್ತುತ ಪಾನ್ ಮಸಾಲಾ ಉತ್ಪನ್ನಕ್ಕೆ ಶೇ 28ರಷ್ಟು ಜಿಎಸ್ಟಿ ಮತ್ತು ಶೇ 60ರಷ್ಟು ಮೇಲ್ತೆರಿಗೆ ವಿಧಿಸಲಾಗುತ್ತಿದೆ. ಪಾನ್ ಮಸಾಲಾ ತಂಬಾಕುರಹಿತ ಆಗಿರುವುದರಿಂದ ಅದರ ತೆರಿಗೆ ಮನ್ನಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.