ನವದೆಹಲಿ: ಅಡುಗೆ ಎಣ್ಣೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮಾರ್ಚ್ 31ರವರೆಗೆ ವರ್ತಕರಿಗೆ ದಾಸ್ತಾನು ಮಿತಿಯನ್ನು ಹೇರಿರುವುದಾಗಿ ಕೇಂದ್ರ ಸರ್ಕಾರವು ಭಾನುವಾರ ಹೇಳಿದೆ.
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಬಳಿ ಲಭ್ಯ ಇರುವ ದಾಸ್ತಾನು ಮತ್ತು ತಮ್ಮಲ್ಲಿನ ಬಳಕೆಯ ಆಧಾರದ ಮೇಲೆ ಅಡುಗೆ ಎಣ್ಣೆ ಹಾಗೂ ಎಣ್ಣೆಬೀಜಗಳ ಮೇಲಿನ ದಾಸ್ತಾನು ಮಿತಿ ಎಷ್ಟು ಎಂಬುದನ್ನು ನಿರ್ಧರಿಸಲಿವೆ. ಆದರೆ, ಕೆಲವು ಆಮದು ಮತ್ತು ರಫ್ತು ವಹಿವಾಟುದಾರರಿಗೆ ಈ ಮಿತಿಯಿಂದ ವಿನಾಯಿತಿ ನೀಡಲಾಗಿದೆ.
ಕೇಂದ್ರದ ನಿರ್ಧಾರದಿಂದ ದೇಶಿ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ತಗ್ಗಲಿದೆ. ಇದರಿಂದಾಗಿ ಗ್ರಾಹಕರಿಗೆ ತುಸು ನೆಮ್ಮದಿ ಸಿಗಲಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಪ್ರಕಟಣೆಯಲ್ಲಿ ಹೇಳಿದೆ. ವಿದೇಶಿ ವ್ಯಾಪಾರದ ಮಹಾನಿರ್ದೇಶಕರು (ಡಿಜಿಎಫ್ಟಿ) ನೀಡಿರುವ ಆಮದು-ರಫ್ತುದಾರರ ಕೋಡ್ ಸಂಖ್ಯೆಯನ್ನು ಹೊಂದಿರುವವರಿಗೆ ದಾಸ್ತಾನು ಮಿತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ಸರ್ಕಾರದ ಮಾಹಿತಿಯ ಪ್ರಕಾರ, ಜಾಗತಿಕ ಅಂಶಗಳು ಹಾಗೂ ಸ್ಥಳೀಯವಾಗಿ ಪೂರೈಕೆ ಕೊರತೆಯಿಂದಾಗಿ ಕಳೆದೊಂದು ವರ್ಷದಲ್ಲಿ ಖಾದ್ಯ ತೈಲ ಬೆಲೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇಕಡ 46.15ರಷ್ಟು ಏರಿಕೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.