ನವದೆಹಲಿ: ‘ದೇಶದ ಬ್ಯಾಂಕುಗಳಿಂದ ನಾನು ಪಡೆದಿರುವ ಎಲ್ಲ ಸಾಲವನ್ನೂ ತೀರಿಸುತ್ತೇನೆ. ದೇಶವೇ ಕೋವಿಡ್–19 ಪಿಡುಗಿನಿಂದ ತತ್ತರಿಸಿ, ಅದರ ವಿರುದ್ಧ ಹೋರಾಡುತ್ತಿರುವ ಇಂಥ ಸಮಯದಲ್ಲಾದರೂ ನನ್ನ ಮನವಿಯನ್ನು ಪುರಸ್ಕರಿಸಬೇಕು’ ಎಂದು ಮದ್ಯದ ಉದ್ಯಮಿ ವಿಜಯ ಮಲ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.
ಇಲ್ಲಿನ ಬ್ಯಾಂಕುಗಳಿಂದ ₹9,000 ಕೋಟಿ ಸಾಲ ಪಡೆದು ವಂಚಿಸಿದ ಆರೋಪ ಹೊತ್ತಿರುವ ಮಲ್ಯ, ಸದ್ಯ ಬ್ರಿಟನ್ನಲ್ಲಿ ತಲೆಮರೆಸಿಕೊಂಡಿದ್ದಾರೆ. ಭಾರತಕ್ಕೆ ಕರೆತರುವ ಸಲುವಾಗಿ ಭಾರತ, ಬ್ರಿಟನ್ನಲ್ಲಿ ಕಾನೂನು ಹೋರಾಟನಡೆಸುತ್ತಿದೆ.
‘ನನ್ನ ಒಡೆತನದ ಕಿಂಗ್ಫಿಶರ್ ಏರ್ಲೈನ್ಸ್ ವಿವಿಧ ಬ್ಯಾಂಕುಗಳಿಂದ ಪಡೆದಿರುವ ಎಲ್ಲ ಸಾಲವನ್ನು ತೀರಿಸುವುದಾಗಿ ಹಲವಾರು ಬಾರಿ ಹೇಳಿದ್ದೇನೆ. ಬ್ಯಾಂಕುಗಳು ನನ್ನ ಮನವಿಯನ್ನು ಪುರಸ್ಕರಿಸಿಲ್ಲ. ನನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಜಾರಿ ನಿರ್ದೇಶನಾಲಯವೂ ಸ್ಪಂದಿಸುತ್ತಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಹಣಕಾಸು ಸಚಿವರು ನನ್ನ ಮಾತನ್ನು ಆಲಿಸುತ್ತಾರೆ ಎಂದು ಆಶಿಸುವೆ’ ಎಂದು ಅವರು ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ.
‘ನನ್ನ ಎಲ್ಲ ಕಂಪನಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರೂ, ನೌಕರರನ್ನು ಮನೆಗೆ ಕಳುಹಿಸಿಲ್ಲ. ಅವರಿಗೆ ನಿರ್ದಿಷ್ಟ ವೇತನ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.