ನವದೆಹಲಿ: ಟಾಟಾ ಸನ್ಸ್ಗೆ ಸಂಬಂಧಿಸಿದ ಪ್ರಕರಣದಲ್ಲಿ ನೀಡಿದ ಆದೇಶದಲ್ಲಿ ತನ್ನ ವಿರುದ್ಧ ಮಾಡಿರುವ ಆರೋಪ ಕೈಬಿಡಬೇಕೆಂದು ಕಂಪನಿ ವ್ಯವಹಾರಗಳ ಸಚಿವಾಲಯವು ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಗೆ (ಎನ್ಸಿಎಲ್ಎಟಿ) ಮನವಿ ಮಾಡಿಕೊಂಡಿದೆ.
ಟಾಟಾ ಸನ್ಸ್ ಕಂಪನಿಯನ್ನು ಸಾರ್ವಜನಿಕ ಕಂಪನಿ ಬದಲಿಗೆ ಖಾಸಗಿ ಕಂಪನಿ ಎಂದು ಬದಲಿಸಿರುವುದು ಅಕ್ರಮ ಎಂದು ಆದೇಶದಲ್ಲಿ ಉಲ್ಲೇಖಿಸಿರುವುದನ್ನು ಕೈಬಿಡಬೇಕೆಂದು ಕಂಪನಿ ರಿಜಿಸ್ಟ್ರಾರ್ (ಆರ್ಒಸಿ) ಮನವಿ ಮಾಡಿಕೊಂಡಿದ್ದಾರೆ.
ಇದೇ 18ರಂದು ನ್ಯಾಯಮಂಡಳಿ ನೀಡಿದ್ದ ಆದೇಶದಲ್ಲಿ ಅಗತ್ಯ ತಿದ್ದುಪಡಿ ತರಬೇಕು. ಮುಂಬೈನ ‘ಆರ್ಒಸಿ’ ತಳೆದಿರುವ ನಿಲುವು ಕಾನೂನುಬಾಹಿರವಲ್ಲ. ಕಂಪನಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಕ್ರಮ ಕೈಗೊಂಡಿರುವುದನ್ನು ಆದೇಶದಲ್ಲಿ ದಾಖಲಿಸಬೇಕು. ಟಾಟಾ ಸನ್ಸ್ನ ಸ್ಥಾನಮಾನವನ್ನು ಬದಲಿಸುವಲ್ಲಿ ಪ್ರಾಮಾಣಿಕ ವಿಧಾನವನ್ನೇ ಅನುಸರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಕೋರಿಕೆಯ ವಿಚಾರಣೆಯನ್ನು ಮುಂದಿನ ವರ್ಷದ ಜನವರಿ 2ಕ್ಕೆ ನಿಗದಿಪಡಿಸಲಾಗಿದೆ.
ಟಾಟಾ ಸನ್ಸ್ನ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಮರು ನೇಮಕ ಮಾಡಬೇಕು ಎಂದು ‘ಎನ್ಸಿಎಲ್ಎಟಿ’ ಆದೇಶಿಸಿದೆ. ಟಾಟಾ ಸಂಸ್ಥೆಗಳ ಪ್ರವರ್ತಕ ಸಂಸ್ಥೆಯಾಗಿರುವ ಟಾಟಾ ಸನ್ಸ್ ಅನ್ನು ಸಾರ್ವಜನಿಕ ಸಂಸ್ಥೆಯಿಂದ ಖಾಸಗಿ ಸಂಸ್ಥೆಯಾಗಿ ಪರಿವರ್ತಿಸಿರುವುದು ಅಕ್ರಮ ಎಂದೂ ಆದೇಶಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.