ಕೊರೊನಾ ಸಂಕಷ್ಟದ ನಡುವೆ ಭಾರತೀಯರಲ್ಲಿ ಚಿನ್ನ ಖರೀದಿಸುವ ಹುಮ್ಮಸ್ಸು ಕಡಿಮೆಯಾಗಿಲ್ಲ. ಸೋಂಕಿನ ಭಯ ಮತ್ತು ಕೋವಿಡ್ 19 ತಡೆಗೆ ಸರ್ಕಾರ ಹೇರಿಕೆ ಮಾಡಿರುವ ಲಾಕ್ಡೌನ್ ಕಾರಣದಿಂದ ಚಿನ್ನ ಖರೀದಿಸುವವರು ಪೇಟೆಗಳಲ್ಲಿರುವ ಸಣ್ಣಪುಟ್ಟ ಚಿನ್ನದಂಗಡಿಗಳನ್ನು ಬಿಟ್ಟು ಬೃಹತ್ ಏಕಮಳಿಗೆಗಳತ್ತ ಮುಖ ಮಾಡಿದ್ದಾರೆ ಎಂಬುದಷ್ಟೇ ವ್ಯತ್ಯಾಸ.
ಕಳೆದ ವರ್ಷಕ್ಕಿಂತ ಶೇ.50ರಷ್ಟು ವ್ಯಾಪಾರ ಹೆಚ್ಚಿರುವುದಾಗಿ ಕಲ್ಯಾಣ್ ಜ್ಯುವೆಲ್ಲರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಮಣ್ ತಿಳಿಸಿದ್ದಾರೆ. ''ಕಳೆದ ತ್ರೈಮಾಸಿಕ ಅವಧಿಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿ ವಹಿವಾಟು ನಡೆದಿದೆ. ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡುತ್ತಿದ್ದಾರೆ. ಕೊರೊನಾ ವೈರಸ್ ನಿರ್ಮಿಸಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಜನಜಂಗುಳಿಯಿರುವ ಬೀದಿಗಳ ಅಂಗಡಿಗಳಿಗೆ ಮತ್ತು ಸಣ್ಣಪುಟ್ಟ ಚಿನ್ನದಂಗಡಿಗಳಿಗೆ ಹೋಗಲು ಗ್ರಾಹಕರು ಹೆದರುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಕಲ್ಯಾಣ್ ಜ್ಯೂವೆಲ್ಲರ್ಸ್ ನಂತಹ ದೊಡ್ಡ ಮಳಿಗೆ ಭೇಟಿ ನೀಡುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಚಿನ್ನ ಖರೀದಿಯ ಪ್ರಮಾಣ 2 ದಶಕಗಳಲ್ಲೇ ಅತಿ ಕಡಿಮೆಗೆ ಇಳಿಕೆಯಾಗಿತ್ತು. ಆದರೆ 2021ರಲ್ಲಿ ಚಿನ್ನ ಖರೀದಿ ಪುನಃ ಗರಿಗೆದರಿತು. ಈ ವೇಳೆಗಾಗಲೇ ಗ್ರಾಹಕರ ಚಿಂತನೆಗಳು ಬದಲಾಗಿವೆ. ವಿವಾಹ ಸಮಾರಂಭಗಳಿಗೆಲ್ಲ ಚಿನ್ನಗಳನ್ನು ದೊಡ್ಡ ಮಳಿಗೆಗಳಿಂದಲೇ ಖರೀದಿಸುತ್ತಿದ್ದಾರೆ. ಇದರಿಂದ ಕಲ್ಯಾಣ್ ಜ್ಯೂವೆಲ್ಲರ್ಸ್ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.54ರಷ್ಟು ಲಾಭ ಗಳಿಸಿದೆ ಎಂದರು.
ಕಲ್ಯಾಣ್ನ ಮಳಿಗೆಗಳಲ್ಲಿ ಶೇ.60ರಷ್ಟು ದಕ್ಷಿಣ ಭಾರತದಲ್ಲಿವೆ. ಕೇರಳ ಮೂಲದ ಕಲ್ಯಾಣ್ ವರ್ಷಾಂತ್ಯಕ್ಕೆ ಹನ್ನೆರಡಕ್ಕೂ ಹೆಚ್ಚಿನ ಮಹಿಳೆಗಳನ್ನು ಹಾಕುವ ಉತ್ಸಾಹದಲ್ಲಿದೆ. ವಿಶ್ವದ 2ನೇ ಅತಿಹೆಚ್ಚು ಚಿನ್ನದ ವಹಿವಾಟು ನಡೆಸುವ ಭಾರತದಲ್ಲಿ ಸಣ್ಣಪುಟ್ಟ ಚಿನ್ನದಂಗಡಿಗಳ ಪ್ರಾಬಲ್ಯವೇ ಹೆಚ್ಚಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.