ADVERTISEMENT

ಬೆಳೆ ವಿಮೆ ವ್ಯಾಪ್ತಿಗೆ ಕಾಫಿ, ಕೇಂದ್ರಕ್ಕೆ ಮನವರಿಕೆ: ಸಚಿವ ಸಿ.ಟಿ.ರವಿ ಹೇಳಿಕೆ

15 ಲಕ್ಷ ಜನರ ಸಂಕಷ್ಟ ತೆರೆದಿಟ್ಟ ಕಾಫಿ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 15:45 IST
Last Updated 6 ಡಿಸೆಂಬರ್ 2019, 15:45 IST
ಕಾಫಿ ವಿದ್ಯಮಾನಗಳ ಕುರಿತ ಕೈಪಿಡಿಯನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಖಜಾಂಚಿ ಐ.ಎಂ.ಮಹೇಶ್‌ ಗೌಡ, ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌, ಹಿರಿಯ ಆರ್ಥಿಕ ತಜ್ಞ ಹಾಗೂ ಪತ್ರಕರ್ತ ದೇವೀಂದರ್‌ ಶರ್ಮಾ ಪ್ರದರ್ಶಿಸಿದರು.  ಪ್ರಜಾವಾಣಿ ಚಿತ್ರ
ಕಾಫಿ ವಿದ್ಯಮಾನಗಳ ಕುರಿತ ಕೈಪಿಡಿಯನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಖಜಾಂಚಿ ಐ.ಎಂ.ಮಹೇಶ್‌ ಗೌಡ, ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌, ಹಿರಿಯ ಆರ್ಥಿಕ ತಜ್ಞ ಹಾಗೂ ಪತ್ರಕರ್ತ ದೇವೀಂದರ್‌ ಶರ್ಮಾ ಪ್ರದರ್ಶಿಸಿದರು.  ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅತಿವೃಷ್ಟಿ, ಹವಾಮಾನ ವೈಪರೀತ್ಯಗಳಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, 15 ಲಕ್ಷ ಜನರ ಬದುಕು ದುಸ್ತರವಾಗಿದೆ. ಇದಕ್ಕಾಗಿ ಕಾಫಿ ಬೆಳೆಯನ್ನೂ ಫಸಲ್‌ ಬಿಮಾ ಯೋಜನೆಯಡಿ ತರಲು ಪ್ರಧಾನಿಗೆ ಶೀಘ್ರ ಮನವರಿಕೆ ಮಾಡಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ವತಿಯಿಂದ ಹೊರತರಲಾದ 2019ನೇ ಸಾಲಿನ ‘ಭಾರತದ ಕಾಫಿ–ಪ್ರಸಕ್ತ ವಿದ್ಯಮಾನಗಳು’ ಕೈಪಿಡಿಯನ್ನು ಶುಕ್ರವಾರ ಇಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘94 ಸಿ ವ್ಯಾಪ್ತಿಗೆ ಕಾಫಿ ಬೆಳೆಗಾರರ ಸಣ್ಣಪುಟ್ಟ ಒತ್ತುವರಿಯನ್ನು ತರುವುದು, ಸರ್ಕಾರಿ ಭೂಮಿ ಕಬಳಿಕೆ ಮಾಡಿಕೊಂಡ ಕಾಫಿ ಬೆಳೆಗಾರರ ಮೇಲಿನ ಪ್ರಕರಣ ತೆಗೆದುಹಾಕಿ, ಅಂತಹ ಜಮೀನನ್ನು ಭೋಗ್ಯಕ್ಕೆ ಕೊಡಿಸುವುದು, ಕೊಮಾರ್ಕ್‌ನಂತಹ ಕಾಫಿ ಖರೀದಿ ಸಂಸ್ಥೆಗಳ ಬಲವರ್ಧನೆಗೆ ಕ್ರಮ ಸಹಿತ ಹಲವು ಯೋಜನೆಗಳನ್ನು ಸರ್ಕಾರ ಹಂತ ಹಂತವಾಗಿ ಜಾರಿಗೆ ತರಲಿದ್ದು, ಬೆಳೆಗಾರರು ಆತಂಕಪಡಬಾರದು’ ಎಂದರು.

ADVERTISEMENT

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಸಮಯ ಕೊಟ್ಟು ಸ್ಪಂದಿಸಲಿದೆ. ಭೂಕುಸಿತದಿಂದ ಕಾಫಿ ಬೆಳೆ ಪ್ರದೇಶ ಕಳೆದುಕೊಂಡವರಿಗೆ ಬದಲಿ ಜಮೀನು ಕೊಡಲು ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ. ಕಾಂಡಕೊರಕ ರೋಗ ಬಾಧೆ ನಿವಾರಣೆಗೆ ಜೈವಿಕ ತಂತ್ರಜ್ಞಾನ ಸಂಸ್ಥೆಗಳ ನೆರವು ಒದಗಿಸಲಾಗುವುದು’ ಎಂದರು.

ಬೆಳೆಗಾರರ ಕಷ್ಟಗಳಿಗೆ ಕೈಗನ್ನಡಿ: ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌ ಅವರು ಕೈಪಿಡಿಯಲ್ಲಿ ನೀಡಲಾದ ಮಾಹಿತಿಯನ್ನು ಸಭೆಯ ಮುಂದಿಟ್ಟು, ಸುಮಾರು 1.5 ಲಕ್ಷ ಕಾಫಿ ಬೆಳೆಗಾರರು ಹಾಗೂ ಅವರನ್ನು ಅವಲಂಬಿಸಿರುವ ಸುಮಾರು 13 ಲಕ್ಷದಷ್ಟು ಜನರ ಬದುಕು ಸಂಕಷ್ಟಕ್ಕೆ ಸಿಲುಕಿದ್ದನ್ನು ವಿವರಿಸಿದರು. ‘ಪಶ್ಚಿಮ ಘಟ್ಟ ಪ್ರದೇಶದ ಜೀವವೈವಿಧ್ಯವನ್ನು ಕಾಪಾಡಿಕೊಂಡು ಕೇವಲ ನೆರಳಿನ ಆಶ್ರಯದಲ್ಲಿ ಬೆಳೆಯುವ ಕಾಫಿಗೆ ಸರ್ಕಾರದ ನೆರವು ಅಗತ್ಯ. ಇಲ್ಲವಾದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದು ಅಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.