ADVERTISEMENT

ಗೌರವ ಉಳಿಸಿಕೊಳ್ಳಲು ಕಾನೂನು ಸಮರ ನಡೆಸಿದ್ದ ಸೈರಸ್‌ ಮಿಸ್ತ್ರಿ

ಪಿಟಿಐ
Published 4 ಸೆಪ್ಟೆಂಬರ್ 2022, 19:11 IST
Last Updated 4 ಸೆಪ್ಟೆಂಬರ್ 2022, 19:11 IST
ಅಪಘಾತದಿಂದ ಹಾಳಾಗಿರುವ ‌ಮಿಸ್ತ್ರಿ ಪ್ರಯಾಣಿಸುತ್ತಿದ್ದ ಕಾರು –ಪಿಟಿಐ ಚಿತ್ರ
ಅಪಘಾತದಿಂದ ಹಾಳಾಗಿರುವ ‌ಮಿಸ್ತ್ರಿ ಪ್ರಯಾಣಿಸುತ್ತಿದ್ದ ಕಾರು –ಪಿಟಿಐ ಚಿತ್ರ   

ಮುಂಬೈ : ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನೇಮಕ ಆಗುವವರೆಗೂ ಸೈರಸ್‌ ಪಲ್ಲೋಂಜಿ ಮಿಸ್ತ್ರಿ ಅವರು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ತಮ್ಮ ಕುಟುಂಬದ ಶಾಪೂರ್ಜಿ ಪಲ್ಲೋಂಜಿ ಸಮೂಹದ ಉದ್ಯಮದಲ್ಲಿ ಅವರು ತೊಡಗಿಕೊಂಡಿದ್ದರು.

2011ರ ನವೆಂಬರ್‌ನಲ್ಲಿ ರತನ್‌ ಟಾಟಾ ಅವರ ಉತ್ತರಾಧಿಕಾರಿಯಾಗಿ
ಮಿಸ್ತ್ರಿ ಅವರನ್ನು ನೇಮಿಸಲಾಯಿತು ಅಲ್ಲಿಂದ 2016ರ ಅಕ್ಟೋಬರ್‌ವರೆಗೆ
ಅವರು ಕಂಪನಿಯ ಬೆಳವಣಿಗೆಗೆ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು.

2016ರ ಅಕ್ಟೋಬರ್‌ನಲ್ಲಿ ಮಿಸ್ತ್ರಿ ಅವರನ್ನು ಟಾಟಾ ಸನ್ಸ್‌ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಲಾಯಿತು. ಅದನ್ನು ಪ್ರಶ್ನಿಸಿ ಮಿಸ್ತ್ರಿ ಅವರು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿಯು ಅವರನ್ನು ಮರು
ನೇಮಕ ಮಾಡುವಂತೆ ಆದೇಶ ನೀಡಿತ್ತು.

ADVERTISEMENT

ಆದರೆ, ಎನ್‌ಸಿಎಲ್‌ಎಟಿ ಆದೇಶವನ್ನು ಪ್ರಶ್ನಿಸಿ ಟಾಟಾ ಸಮೂಹವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು 2021ರ ಮಾರ್ಚ್‌ನಲ್ಲಿ ಎನ್‌ಸಿಎಲ್‌ಎಟಿ ಆದೇಶವನ್ನು ರದ್ದುಪಡಿಸಿತು.

ಚುರುಕು ಬುದ್ಧಿಯ ಅಧ್ಯಯನಶೀಲ ಕಾರ್ಯನಿರ್ವಾಹಕ ಎನಿಸಿಕೊಂಡಿದ್ದ ಮಿಸ್ತ್ರಿ, ಒಂಟಿಯಾಗಿ ಇರಲು ಬಯಸುತ್ತಿದ್ದರು. ಮಾತಿಗಿಂತಲೂ ಕೆಲಸ ಮಾಡುವುದರಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದರು. ಅಧಿಕಾರದಲ್ಲಿ ಇದ್ದ ನಾಲ್ಕು ವರ್ಷಗಳಲ್ಲಿ ಅವರು ಮಾಧ್ಯಮಗಳಿಗೆ ಒಂದೇ ಒಂದು ಸಂದರ್ಶನವನ್ನೂ ನೀಡಿರಲಿಲ್ಲ. ಟಾಟಾ ಸನ್ಸ್‌ನಿಂದ ವಜಾಗೊಂಡ ಬಳಿಕ ಅವರು ಮಾಧ್ಯಮಗಳ ಜತೆ ಹೆಚ್ಚು ಮಾತನಾಡಲು ಆರಂಭಿಸಿದರು.

ಟಾಟಾ ಸಮೂಹದೊಂದಿಗೆ ಅವರು ಕಾನೂನು ಸಮರ ನಡೆಸುತ್ತಿದ್ದಾಗ ಕಾರ್ಪೊರೇಟ್‌ ಜಗತ್ತಿನ ಪ್ರಮುಖರು ಅವರ ಪರವಾಗಿ ನಿಲ್ಲಲಿಲ್ಲ.

ಶಾಪೂರ್ಜಿ ಪಲ್ಲೋಂಜಿ ಸಮೂಹವು ಟಾಟಾ ಸನ್ಸ್‌ನಲ್ಲಿ ಶೇ18.4ರಷ್ಟು ಪಾಲು ಬಂಡವಾಳ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.