ನವದೆಹಲಿ: ಜೀವ ವಿಮೆ ಪಾಲಿಸಿ ಖರೀದಿಸಿದವರು ಒಂದು ವೇಳೆ ’ಕೋವಿಡ್–19’ನಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಮರಣ ಪರಿಹಾರ ಕೊಡುವುದು ಎಲ್ಲ ಜೀವ ವಿಮೆ ಕಂಪನಿಗಳ ಕರ್ತವ್ಯವಾಗಿದೆ ಎಂದು ಜೀವ ವಿಮೆ ಮಂಡಳಿಯು ತಿಳಿಸಿದೆ.
‘ಕೋವಿಡ್–19’ ಪ್ರಕರಣಗಳಲ್ಲಿನ ಯಾವುದೇ ಸಾವಿನ ಪ್ರಕರಣಗಳ ಕ್ಲೇಮ್ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಪರಿಹಾರ ಧನ ವಿತರಿಸಲು ಸರ್ಕಾರಿ ಮತ್ತು ಖಾಸಗಿ ವಿಮೆ ಕಂಪನಿಗಳು ಬದ್ಧವಾಗಿರಬೇಕು. ಇಂತಹ ಸಾವಿನ ಕ್ಲೇಮ್ ಪ್ರಕರಣಗಳಲ್ಲಿ ‘ಅನಿರೀಕ್ಷಿತ ಸಂದರ್ಭ’ ನಿಯಮವು ಅನ್ವಯಗೊಳ್ಳುವುದಿಲ್ಲ ಎಂದು ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.
‘ಎಲ್ಲ ವಿಮೆ ಕಂಪನಿಗಳು ತಮ್ಮ ಗ್ರಾಹಕರಿಗೆ ವೈಯಕ್ತಿಕವಾಗಿ ಈ ಮಾಹಿತಿ ನೀಡಲು ಸೂಚಿಸಲಾಗಿದೆ’ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್. ಎನ್. ಭಟ್ಟಾಚಾರ್ಯ ತಿಳಿಸಿದ್ದಾರೆ.
ವಿಮೆ ಪರಿಹಾರ ಕುರಿತ ‘ಅನಿರೀಕ್ಷಿತ ಸಂದರ್ಭ‘ ನಿಯಮಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕು ಎಂದು ಗ್ರಾಹಕರು ಜೀವ ವಿಮೆ ಕಂಪನಿಗಳಿಗೆ ಮನವಿ ಮಾಡಿಕೊಂಡಿದ್ದರು.
‘ಸದ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಜೀವ ವಿಮೆಯ ಎಲ್ಲ ಕಂಪನಿಗಳು ತಮ್ಮ ಗ್ರಾಹಕರ ಬೆಂಬಲಕ್ಕೆ ನಿಲ್ಲಬೇಕು. ತಪ್ಪು ಮಾಹಿತಿಗಳು ಗ್ರಾಹಕರಲ್ಲಿ ಗೊಂದಲ ಮೂಡಿಸಬಾರದು‘ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.