ರೇಷ್ಮೆಗೂಡು
ಮೈಸೂರು: ಮೈಸೂರು ಭಾಗದಲ್ಲಿ ಸದ್ಯ ದ್ವಿತಳಿ (ಬೈವೋಲ್ಟನ್) ಗೂಡನ್ನು ರೈತರು ಹೆಚ್ಚು ಬೆಳೆಯುತ್ತಿದ್ದು, ಬೇಸಿಗೆಯ ಕಾರಣಕ್ಕೆ ಉತ್ಪಾದನೆ ಹಾಗೂ ಇಳುವರಿ ಗಣನೀಯವಾಗಿ ಕುಸಿದಿದೆ.
ಮೈಸೂರಿನ ಎಪಿಎಂಸಿ ಆವರಣದಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಗೆ ಸದ್ಯ ಪ್ರತಿದಿನ 1.5ರಿಂದ 2 ಟನ್ನಷ್ಟು ದ್ವಿತಳಿ ಗೂಡು ಆವಕ ಆಗುತ್ತಿದ್ದು, ಸರಾಸರಿ 1 ಟನ್ನಷ್ಟು ಗೂಡು ಕಡಿಮೆ ಆಗಿದೆ. ಪ್ರತಿ ಕೆ.ಜಿ.ಗೆ ಕನಿಷ್ಠ ₹650ರಿಂದ ಗರಿಷ್ಠ ₹900ರವರೆಗೆ ಮಾರಾಟ ನಡೆದಿದ್ದು, ರೈತರಿಗೆ ಉತ್ತಮ ದರ ಸಿಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಗೆ ಮಂಡ್ಯ, ಮಳವಳ್ಳಿ, ಕನಕಪುರ ಭಾಗದಿಂದಲೂ ಗೂಡಿನ ಆವಕವಾಗುತ್ತಿದೆ. ಬೆಲೆ ಹೆಚ್ಚಳದ ಕಾರಣಕ್ಕೆ ದ್ವಿತಳಿ ಗೂಡನ್ನು ನೇರವಾಗಿ ವರ್ತಕರೇ ರೈತರಿಂದ ಖರೀದಿಸಿ ತಮಿಳುನಾಡಿಗೆ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಮಿಶ್ರ ತಳಿ ಗೂಡಷ್ಟೇ ಹೆಚ್ಚು ಆವಕ ಆಗುತ್ತಿದೆ. ನಿತ್ಯ ಸರಾಸರಿ 12– 13 ಟನ್ನಷ್ಟು ಗೂಡು ಬರುತ್ತಿದೆ. ಸೋಮವಾರ ಪ್ರತಿ ಕೆ.ಜಿ.ಗೆ ಕನಿಷ್ಠ ₹570 ಹಾಗೂ ಗರಿಷ್ಠ ₹730ರ ದರದಲ್ಲಿ ಹರಾಜು ನಡೆಯಿತು.
ಚಾಮರಾಜನಗರ ಜಿಲ್ಲೆಯ ಯಳಂದೂರಿನ ಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ದ್ವಿತಳಿ ಸರಾಸರಿ ₹650 ಹಾಗೂ ಮಿಶ್ರತಳಿ ಗೂಡು ₹455ರ ದರದಲ್ಲಿ ಹರಾಜು ನಡೆಯಿತು.
ರೇಷ್ಮೆಗೆ ಮಾರುಕಟ್ಟೆಯೇ ಇಲ್ಲ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ ಪ್ರಸ್ತುತ 368 ರೇಷ್ಮೆ ಬೆಳೆಗಾರರು 998 ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ರೈತ ಉತ್ಪಾದಿಸಿದ ರೇಷ್ಮೆಗೆ ಸಮೀಪದಲ್ಲಿ ಮಾರುಕಟ್ಟೆ ಇಲ್ಲ. ಹೀಗಾಗಿ ಲಿಂಗಸುಗೂರಿನಿಂದ ರಾಮನಗರ ಮಾರುಕಟ್ಟೆಗೆ ಹೋಗಬೇಕಾದ ಸ್ಥಿತಿ ಇದೆ. ರೇಷ್ಮೆ ಮಾರಾಟ ಮಾಡಬೇಕೆಂದರೆ ಸಾಗಣೆಯ ವೆಚ್ಚವೇ ಹೊರೆಯಾಗುತ್ತಿದೆ. ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಆರಕ್ಕೆ ಏರಿಲ್ಲ. ಮೂರಕ್ಕೆ ಇಳಿದಿಲ್ಲ ಎಂದು ಲಿಂಗಸುಗೂರಿನ ರೇಷ್ಮೆ ಬೆಳೆಗಾರ ಭೀಮಸೇನ ಉದ್ದಾರ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.