ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶೀಘ್ರದಲ್ಲೇ ಇನ್ನೊಂದು ಸುತ್ತಿನ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಿಸಲಿದ್ದಾರೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಮಂಗಳವಾರ ತಿಳಿಸಿದ್ದಾರೆ.
ಅರ್ಥ ವ್ಯವಸ್ಥೆಯ ವಿವಿಧ ಅಂಗಗಳಿಂದ ಬಂದಿರುವ ಮನವಿಗಳು ಹಾಗೂ ಸಲಹೆಗಳನ್ನು ಹಣಕಾಸು ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹೊಸ ಪ್ಯಾಕೇಜ್ ಯಾವ ದಿನ ಘೋಷಣೆ ಆಗುತ್ತದೆ ಎಂಬುದನ್ನು ಹೇಳುವುದು ಕಷ್ಟ. ಆದರೆ, ಅದು ಶೀಘ್ರವೇ ಆಗುತ್ತದೆ. ಹಣಕಾಸು ಸಚಿವರೇ ಆ ಬಗ್ಗೆ ವಿವರ ನೀಡಲಿದ್ದಾರೆ’ ಎಂದು ಬಜಾಜ್ ಹೇಳಿದರು. ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚಿಸಲು ಹಾಗೂ ಬಂಡವಾಳ ವೆಚ್ಚ ಹೆಚ್ಚು ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿಂದಿನ ತಿಂಗಳು ಕೆಲವು ಕ್ರಮಗಳನ್ನು ಪ್ರಕಟಿಸಿದ್ದರು.
ಆಹಾರ ವಸ್ತುಗಳ ಬೆಲೆಯು ತುಟ್ಟಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಜಾಜ್, ‘ಇದು ತಾತ್ಕಾಲಿಕ, ಅಷ್ಟೇ. ಬೆಲೆ ಹೆಚ್ಚಳ ನಿಯಂತ್ರಿಸಲು ಸರ್ಕಾರವು ಕೆಲವು ಕ್ರಮಗಳನ್ನು ಕೈಗೊಂಡಿದೆ’ ಎಂದರು. ಬೆಲೆ ಏರಿಕೆಗೂ ಸರಕು ಸಾಗಣೆಗೂ ನಂಟಿದೆ. ಹೊಸದಾಗಿ ಕಟಾವು ಮಾಡಿರುವ ಬೆಳೆ ಮಾರುಕಟ್ಟೆಗೆ ಬಂದಾದ ಬೆಲೆ ತಗ್ಗಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.