ನವದೆಹಲಿ: ಕೊಬ್ಬರಿ ಎಣ್ಣೆಯ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರವು ಕೊಬ್ಬರಿ ಎಣ್ಣೆ (ತೆಂಗಿನೆಣ್ಣೆ) ಮತ್ತು ಕೊಬ್ಬರಿ ಆಮದಿಗೆ ಅನುಮತಿ ನೀಡಬೇಕು ಎಂದು ಭಾರತದ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್ಇಎ) ಶುಕ್ರವಾರ ಒತ್ತಾಯಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಬ್ಬರಿ ಎಣ್ಣೆ ಬೆಲೆಯು ಮೂರು ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಗ್ರಾಹಕರ ಹಿತದೃಷ್ಟಿಯಿಂದ 6 ತಿಂಗಳಿನಿಂದ 12 ತಿಂಗಳವರೆಗೆ ಇದರ ಆಮದಿಗೆ ತಕ್ಷಣವೇ ಅನುಮತಿ ನೀಡಬೇಕು ಎಂದು ಹೇಳಿದೆ.
ಕಳೆದ ವರ್ಷ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ ಕೊಬ್ಬರಿ ಎಣ್ಣೆ ದರ ಸುಮಾರು ₹130 ಇತ್ತು. ಅದು ಪ್ರಸ್ತುತ ₹400 ದಾಟಿದೆ. ಇದರಿಂದ ಗ್ರಾಹಕರು ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಖರೀದಿಸುವಂತಾಗಿದೆ.
ಕೀಟಗಳ ದಾಳಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಕೊಬ್ಬರಿ ಉತ್ಪಾದನೆಯಲ್ಲಿ ಶೇ 40ರಷ್ಟು ಇಳಿಕೆಯಾಗಿದೆ. ಇದೇ ರೀತಿ ದರ ಹೆಚ್ಚಳವಾದರೆ ಕೊಬ್ಬರಿ ಎಣ್ಣೆ ಖರೀದಿಯಿಂದ ಗ್ರಾಹಕರು ಹಿಂದೆ ಸರಿದು ಇತರೆ ಅಡುಗೆ ಎಣ್ಣೆ ಖರೀದಿಗೆ ಮುಂದಾಗಲಿದ್ದಾರೆ. ಇದು ಈ ಎಣ್ಣೆಗಳ ಬೆಲೆಯ ಮೇಲೆ ಪರಿಣಾಮ ಬೀರಲಿದೆ ಮತ್ತು ಆಮದು ಅವಲಂಬನೆಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದೆ.
ಕೊಬ್ಬರಿ ಮತ್ತು ಕೊಬ್ಬರಿ ಎಣ್ಣೆಯ ಆಮದಿನಿಂದ ಬೆಳೆಗಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬೆಲೆಯನ್ನು ಸ್ಥಿರಗೊಳಿಸುತ್ತದೆ ಎಂದು ಹೇಳಿದೆ.
ಕೇರಳವು ಕೊಬ್ಬರಿ ಎಣ್ಣೆಯ ಪ್ರಮುಖ ಮಾರುಕಟ್ಟೆಯಾಗಿದ್ದು, ಬೆಲೆ ಏರಿಕೆಯಿಂದ ಕೊಬ್ಬರಿ ಎಣ್ಣೆಯಿಂದ ದೂರ ಸರಿಯುತ್ತಿದೆ. ದರ ಹೆಚ್ಚಳದಿಂದ ಕಲಬೆರಕೆ ಹೆಚ್ಚುತ್ತಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.