ನವದೆಹಲಿ (ಪಿಟಿಐ): ಕರ್ನಾಟಕದಿಂದ ಕಬ್ಬಿಣದ ಅದಿರನ್ನು ರಫ್ತು ಮಾಡುವುದರ ಮೇಲೆ ವಿಧಿಸಿರುವ ನಿಷೇಧದ ಬಗ್ಗೆ ಭಾರತೀಯ ಗಣಿಗಾರಿಕೆ ಉದ್ದಿಮೆಗಳ ಮಹಾಸಂಘದ (ಫಿಮಿ) ದಕ್ಷಿಣ ಭಾರತ ಘಟಕವು ಕಳವಳ ವ್ಯಕ್ತಪಡಿಸಿದೆ.
‘ರಾಜ್ಯದಲ್ಲಿ ಕಬ್ಬಿಣದ ಅದಿರು ಯಥೇಚ್ಛವಾಗಿ ಲಭ್ಯವಿದ್ದರೂ ಕೆಲವು ಸಂದರ್ಭಗಳಲ್ಲಿ ಬೇರೆ ಕಡೆಗಳಿಂದ ಅದಿರನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ರಾಜ್ಯದ ಉದ್ದಿಮೆಗಳ ಮೇಲೆ ಒತ್ತಡ ಸೃಷ್ಟಿಯಾಗುತ್ತಿದೆ. ಅದಿರು ಮಾರಾಟ ಮಾಡಲು ಬೆಲೆ ತಗ್ಗಿಸಬೇಕಾಗಿ ಬರುತ್ತಿದೆ’ ಎಂದು ಫಿಮಿ ರಾಜ್ಯ ಸರ್ಕಾರಕ್ಕೆ ಈಚೆಗೆ ಬರೆದ ಪತ್ರದಲ್ಲಿ ಹೇಳಿದೆ.
ಈ ನಿಷೇಧವು ಗಣಿಗಾರಿಕೆ ಉದ್ಯಮ ವಲಯವು ರಾಜ್ಯದಲ್ಲಿ ಬೆಳೆಯುವುದನ್ನು ತಡೆಯುತ್ತಿದೆ. ಈ ಉದ್ಯಮಕ್ಕೆ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡುವ ಸಾಮರ್ಥ್ಯ ಇದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.