ನವದೆಹಲಿ: ಎಲ್ಲಾ ಪೆಟ್ರೋಲ್ ಬಂಕ್ಗಳು ತನ್ನ ವ್ಯಾಪ್ತಿಯ 100 ಮೀಟರ್ ಸುತ್ತಮುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯು (ಪಿಎನ್ಜಿಆರ್ಬಿ) ಸೂಚಿಸಿದೆ.
ಮೇ ತಿಂಗಳಿನಲ್ಲಿ ಮುಂಬೈನ ಘಾಟ್ಕೊಪರ್ ಪೆಟ್ರೋಲ್ ಬಂಕ್ ಮೇಲೆ ಬೃಹತ್ ಜಾಹೀರಾತು ಫಲಕ ಉರುಳಿ ಬಿದ್ದು 17 ಮಂದಿ ಮೃತಪಟ್ಟಿದ್ದರು. ಈ ಘಟನೆ ಕುರಿತು ತನಿಖೆ ನಡೆಸಲು ಮಂಡಳಿಯಿಂದ ಸಮಿತಿ ರಚಿಸಲಾಗಿತ್ತು.
ಸಮಿತಿಯು ಮಂಡಳಿಗೆ ಅಂತಿಮ ವರದಿ ಸಲ್ಲಿಸಿದೆ. ಸಮಿತಿಯ ಶಿಫಾರಸಿನಂತೆ ಎಲ್ಲ ಇಂಧನ ಮಾರಾಟಗಾರರು ಮತ್ತು ಷೇರುದಾರರು ಒಂದು ತಿಂಗಳೊಳಗೆ ಬಂಕ್ನ ಆವರಣದ ಸುತ್ತಮುತ್ತ ಸುರಕ್ಷತಾ ಕ್ರಮಕೈಗೊಳ್ಳಬೇಕು ಎಂದು ಹೇಳಿದೆ.
ಆದರೆ, ಸಮಿತಿಯು ಘಟನೆ ಬಗ್ಗೆ ತನಿಖೆ ಮೂಲಕ ಪತ್ತೆ ಹಚ್ಚಿರುವ ವಿವರನ್ನು ಮಂಡಳಿಯು ಬಹಿರಂಗಪಡಿಸಿಲ್ಲ.
ಬಂಕ್ನ ಆವರಣ ಹಾಗೂ ಸುತ್ತಮುತ್ತ ಇರುವ ಅಪಾಯಕಾರಿ ಜಾಹೀರಾತು ಫಲಕಗಳು, ಬಿಲ್ ಬೋರ್ಡ್, ಕಟ್ಟಡಗಳನ್ನು ಗುರುತಿಸಬೇಕು. ಇವುಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.