ADVERTISEMENT

ಶೀಘ್ರ ಹೊಸ ಚಿನ್ನದ ನೀತಿ: ಸಚಿವ ಸುರೇಶ್‌ ಪ್ರಭು

ಪಿಟಿಐ
Published 29 ಡಿಸೆಂಬರ್ 2018, 17:21 IST
Last Updated 29 ಡಿಸೆಂಬರ್ 2018, 17:21 IST
GOLD
GOLD   

ನವದೆಹಲಿ: ಸಮಗ್ರ ಚಿನ್ನದ ನೀತಿ ರೂಪಿಸಲು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ಶೀಘ್ರದಲ್ಲಿಯೇ ಅನಾವರಣಗೊಳ್ಳಲಿದೆ.

‘ಚಿನ್ನದ ಉದ್ದಿಮೆ ಮತ್ತು ಚಿನ್ನಾಭರಣಗಳ ರಫ್ತು ವಹಿವಾಟು ಉತ್ತೇಜಿಸುವ ಉದ್ದೇಶದ ಹೊಸ ನೀತಿಯು ಸದ್ಯದಲ್ಲೇ ಜಾರಿಗೆ ಬರಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಚಿನ್ನದ ಆಮದು ಸುಂಕ ಕಡಿತಗೊಳಿಸುವ ಪ್ರಸ್ತಾವವನ್ನು ಹೊಸ ನೀತಿಯು ಒಳಗೊಂಡಿರಲಿದೆಯೇ? ಎನ್ನುವ ಪ್ರಶ್ನೆಗೆ, ‘ಈ ಬೇಡಿಕೆಯನ್ನು ಸರ್ಕಾರ ಪರಿಶೀಲಿಸಲಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಚಿನ್ನದ ವಹಿವಾಟಿಗೆ ಸಂಬಂಧಿಸಿದ ಎಲ್ಲ ಭಾಗಿದಾರರ ಜತೆ ಸಭೆ ನಡೆಸಿ ಸಮಗ್ರ ನೀತಿಗೆ ಸದ್ಯದಲ್ಲೇ ಅಂತಿಮ ರೂಪ ನೀಡಲಾಗುವುದು. ಭಾರತವು ಮೌಲ್ಯವರ್ಧಿತ ಚಿನ್ನದ ಉತ್ತಮ ರಫ್ತುದಾರ ದೇಶವಾಗುವ ಎಲ್ಲ ಅರ್ಹತೆಗಳನ್ನು ಹೊಂದಿದೆ’ ಎಂದು ಹೇಳಿದ್ದಾರೆ.

ಸದ್ಯಕ್ಕೆ ಜಾರಿಯಲ್ಲಿ ಇರುವ ಶೇ 10 ರಷ್ಟು ಆಮದು ಸುಂಕವನ್ನು ಶೇ 4ಕ್ಕೆ ಇಳಿಸಬೇಕು ಎಂದು ದೇಶಿ ಚಿನ್ನದ ಉದ್ದಿಮೆಯು ಹಕ್ಕೊತ್ತಾಯ ಮುಂದಿಟ್ಟಿದೆ. ಸರ್ಕಾರದ ಚಿಂತಕರ ಚಾವಡಿಯಾಗಿರುವ ನೀತಿ ಆಯೋಗವು ಕೂಡ ಆಮದು ಸುಂಕ ಮತ್ತು ಶೇ 3ರಷ್ಟು ಜಿಎಸ್‌ಟಿ ತಗ್ಗಿಸಲು ಶಿಫಾರಸು ಮಾಡಿದೆ. ಚಿನ್ನ ನಗದೀಕರಣ ಮತ್ತು ಚಿನ್ನದ ಬಾಂಡ್‌ ಯೋಜನೆಗಳನ್ನು ಪರಾಮರ್ಶಿಸಬೇಕು ಎಂದೂ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.