ಮುಂಬೈ:ಈ ಬಾರಿಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನದ ಮಾರಾಟವು ಕೋವಿಡ್ಗೂ ಮುಂಚಿನ ಮಟ್ಟಕ್ಕಿಂತಲೂ ಶೇ 30ರಷ್ಟು ಹೆಚ್ಚಿಗೆ ಇರಲಿದೆ ಎಂದು ಅಖಿಲ ಭಾರತ ರತ್ನ ಮತ್ತು ಚಿನ್ನಾಭರಣ ದೇಶಿ ಮಂಡಳಿ (ಜಿಜೆಸಿ) ಹೇಳಿದೆ.
ದೇಶದ ಆರ್ಥಿಕತೆಯು ನಿರೀಕ್ಷೆಗಿಂತಲೂ ವೇಗವಾಗಿ ಚೇತರಿಕೆ ಕಾಣುತ್ತಿರುವುದು ಮತ್ತು ಬೇಡಿಕೆ ಹೆಚ್ಚಾಗುತ್ತಿರುವ ಕಾರಣಗಳಿಂದಾಗಿ ಚಿನ್ನದ ಮಾರಾಟ ಈ ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ತಿಳಿಸಿದೆ.
ಕ್ಯಾಲೆಂಡರ್ ವರ್ಷದ 3ನೇ ತ್ರೈಮಾಸಿಕದಿಂದ ಮಾರಾಟದಲ್ಲಿ ಪ್ರಗತಿ ಕಂಡುಬರುತ್ತಿದೆ. ಆರ್ಥಿಕತೆಯು ಚೇತರಿಕೆ ಹಾದಿಗೆ ಮರಳಿದೆ ಎನ್ನುವು
ದನ್ನು ಕಳೆದ ಕೆಲವು ತಿಂಗಳುಗಳಲ್ಲಿ ಆಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ಸೂಚಿಸುತ್ತಿದೆ. ಕೋವಿಡ್ನಿಂದಾಗಿ ಮುಂದಕ್ಕೆ ಹೋಗಿದ್ದ ಮದುವೆ ಸಮಾರಂಭಗಳು ಈ ವರ್ಷಾಂತ್ಯದ ವೇಳೆಗೆ ನಡೆಯಲಿರುವುದು ರತ್ನ ಮತ್ತು ಚಿನ್ನಾಭರಣಗಳ ಬೇಡಿಕೆ ಹೆಚ್ಚಿಸಲಿವೆ ಎಂದು ಜಿಜೆಸಿ ಅಧ್ಯಕ್ಷ ಆಶಿಶ್ ಪೇಠೆ ಹೇಳಿದ್ದಾರೆ.
ಕೋವಿಡ್ ನಿರ್ಬಂಧಗಳು ನಿಧಾನವಾಗಿ ಹಿಂದಕ್ಕೆ ಪಡೆಯುತ್ತಿರುವುದರಿಂದ ಚಿನ್ನಾಭರಣಗಳ ರಿಟೇಲ್ ಬೇಡಿಕೆಯು ಕೋವಿಡ್ಗೂ ಮುಂಚಿನ ಮಟ್ಟಕ್ಕೆ ಮರಳುತ್ತಿದೆ ಎಂದು ವಿಶ್ವ ಚಿನ್ನ ಸಮಿತಿಯ (ಡಬ್ಲ್ಯುಜಿಸಿ)ಭಾರತದ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿಆರ್ ತಿಳಿಸಿದ್ದಾರೆ.
ನವರಾತ್ರಿಯ ಆರಂಭದಿಂದಲೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ ಎಂದು ಪಿಎನ್ಜಿ ಜುವೆಲರ್ಸ್ನ ಅಧ್ಯಕ್ಷ ಸೌರಭ್ ಗಾಡ್ಗಿಲ್ ಹೇಳಿದ್ದಾರೆ.
ಆರ್ಥಿಕತೆಯು ಚೇತರಿಕೆ ಹಾದಿಯಲ್ಲಿ ಇರುವುದರಿಂದ ದೀಪಾವಳಿಯಲ್ಲಿ ಗ್ರಾಹಕರ ಬೇಡಿಕೆಯ ಸಕಾರಾತ್ಮಕವಾಗಿ ಇರುವ ನಿರೀಕ್ಷೆ ಮಾಡಲಾಗಿದೆ. ಕಳೆದ ವರ್ಷದಲ್ಲಿ ದೀಪಾವಳಿಯ ಮಾರಾಟಕ್ಕೆ ಹೋಲಿಸಿದರೆ ಈ ಬಾರಿಯ ಮಾರಾಟವು ಶೇ 30 ರಿಂದ ಶೇ 40ರಷ್ಟು ಹೆಚ್ಚಾಗುವ ಅಂದಾಜು ಮಾಡಲಾಗಿದೆ ಎಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ಅಧ್ಯಕ್ಷ ಎಂ.ಪಿ. ಅಹಮದ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.