ನವದೆಹಲಿ: ‘ಷೇರು ವಿಕ್ರಯ ಸೇರಿದಂತೆ ಬಜೆಟ್ನಲ್ಲಿ ನಿಗದಿಪಡಿಸಿರುವ ಗುರಿಗಳಲ್ಲಿ ಉತ್ಪ್ರೇಕ್ಷೆ ಇಲ್ಲ. ಅವೆಲ್ಲವೂ ವಾಸ್ತವಿಕ ನೆಲೆಯಲ್ಲಿದ್ದು ಈಡೇರಲಿವೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
‘ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ –2003’ರ ಅನ್ವಯ, 2020–21ರ ವೇಳೆಗೆ ಇದನ್ನು ಒಟ್ಟು ಆಂತರಿಕ ಉತ್ಪನ್ನದ ಶೇ 3ಕ್ಕೆ ನಿಗದಿಪಡಿಸುವ ಗುರಿ ಸಾಧಿಸಲು ನಾನು ಬದ್ಧಳಾಗಿರುವೆ. ಸರ್ಕಾರದ ಒಟ್ಟಾರೆ ವೆಚ್ಚ ಮತ್ತು ವರಮಾನ ನಡುವಣ ವ್ಯತ್ಯಾಸವಾಗಿರುವ ವಿತ್ತೀಯ ಕೊರತೆಯಲ್ಲಿನ ಪ್ರಾಥಮಿಕ ಕೊರತೆಯನ್ನೂ ಇಲ್ಲದಂತೆ ಮಾಡಲಾಗುವುದು’ ಎಂದು ಹೇಳಿದ್ದಾರೆ. ವಿತ್ತೀಯ ಕೊರತೆಯಲ್ಲಿ ಬಡ್ಡಿ ಪಾವತಿ ಕಳೆದ ನಂತರದ ಉಳಿಕೆಯನ್ನು ಪ್ರಾಥಮಿಕ ವ್ಯತ್ಯಾಸ ಎನ್ನುತ್ತಾರೆ.
ಬೇಡಿಕೆ ಹೆಚ್ಚಳಕ್ಕೆ ಬಜೆಟ್ನಲ್ಲಿ ಹೆಚ್ಚಿನ ಒತ್ತಾಸೆ ಇಲ್ಲ ಎನ್ನುವ ಟೀಕೆಗೂ ನಿರ್ಮಲಾ ಉತ್ತರ ನೀಡಿದ್ದಾರೆ. ‘ನಾವು ಬೇಡಿಕೆಗೆ ಉತ್ತೇಜನ ನೀಡುವುದನ್ನು ನಿರ್ಲಕ್ಷಿಸಿಲ್ಲ. ಮೂಲ ಸೌಕರ್ಯಗಳ ಅಭಿವೃದ್ಧಿ ಮೂಲಕ ಸರ್ಕಾರಿ ವೆಚ್ಚ ಹೆಚ್ಚಲಿದೆ. ಇದು ಬೇಡಿಕೆ ಹೆಚ್ಚಿಸಲು ನೆರವಾಗಲಿದೆ’ ಎಂದು ಬಜೆಟ್ ಮಂಡನೆ ನಂತರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
‘ಬಜೆಟ್ ಗುರಿಗಳೆಲ್ಲ ಸಮಂಜಸವಾಗಿವೆ. ಷೇರು ವಿಕ್ರಯಕ್ಕೆ ನಿಗದಿ ಮಾಡಿರುವ ಗುರಿಯು ಈ ಹಿಂದಿನ ಗುರಿಗಿಂತ ₹ 25 ಸಾವಿರ ಕೋಟಿ ಹೆಚ್ಚಿಗಷ್ಟೇ ಇದೆ. ನೇರ (ಶೇ 17.5) ಮತ್ತು ಪರೋಕ್ಷ ತೆರಿಗೆ ಸಂಗ್ರಹ (ಶೇ 15.5) ಗುರಿಯೂ ವಾಸ್ತವಿಕ ನೆಲೆಗಟ್ಟು ಆಧರಿಸಿದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.