ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ತನ್ನ ಒಟ್ಟಾರೆ ವೆಚ್ಚದಲ್ಲಿ ₹ 2 ಲಕ್ಷ ಕೋಟಿ ಕಡಿತ ಮಾಡಲು ಆಲೋಚಿಸುತ್ತಿದೆ.
ವರಮಾನ ಸಂಗ್ರಹದಲ್ಲಿ ₹ 2.5 ಲಕ್ಷ ಕೋಟಿಗಳಷ್ಟು ಕೊರತೆ ಬೀಳಲಿದೆ. ಈ ಕಾರಣಕ್ಕೆ ವಿತ್ತೀಯ ಕೊರತೆಯನ್ನು ‘ಸ್ವೀಕಾರಾರ್ಹ ಮಿತಿ’ ಒಳಗೆ ಕಾಯ್ದುಕೊಳ್ಳಲು ಸರ್ಕಾರಕ್ಕೆ ಬೇರೆ ಆಯ್ಕೆಗಳೇ ಇಲ್ಲ ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ಒಂದು ವೇಳೆ ವೆಚ್ಚ ಕಡಿತಕ್ಕೆ ಮುಂದಾದರೆ, ಆರು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿ ಆರ್ಥಿಕ ಪ್ರಗತಿ ಕಾಣುತ್ತಿರುವ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ.
ಕಾರ್ಪೊರೇಟ್ಗಳ ಗಳಿಕೆಯಲ್ಲಿನ ನಿಧಾನ ಪ್ರಗತಿ, ಸರಕು ಮತ್ತು ಸೇವೆಗಳ ಬೇಡಿಕೆ ಕುಸಿತದ ಕಾರಣಕ್ಕೆ ಈ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಇದರಿಂದ ಆರ್ಥಿಕ ಪ್ರಗತಿಗೆ ಅಡಚಣೆ ಎದುರಾಗಲಿದೆ. ಖಾಸಗಿ ಬಂಡವಾಳ ಹೂಡಿಕೆಯು ಕಡಿಮೆಯಾಗಿರುವುದರಿಂದ ಆರ್ಥಿಕ ಪ್ರಗತಿಯು ಇನ್ನಷ್ಟು ಕುಂಠಿತಗೊಳ್ಳಲಿದೆ. ಕಾರ್ಪೊರೇಟ್ ತೆರಿಗೆ ಕಡಿತವು ಖಾಸಗಿ ಹೂಡಿಕೆ ಹೆಚ್ಚಿಸಲು ವಿಫಲವಾಗಿದೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ.
ಸರ್ಕಾರವು ತನ್ನ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.8ಕ್ಕೆ ಮಿತಿಗೊಳಿಸುವ ಸಾಧ್ಯತೆ ಇದೆ. ಪ್ರಸಕ್ತ ಸಾಲಿನ ವಿತ್ತೀಯ ಕೊರತೆಯನ್ನು ಶೇ 3.3ಕ್ಕೆ ನಿಗದಿಪಡಿಸಿತ್ತು.
***
* ₹ 27.86 ಲಕ್ಷ ಕೋಟಿ :2019–20ನೇ ಹಣಕಾಸು ವರ್ಷದಲ್ಲಿನ ಒಟ್ಟು ವೆಚ್ಚದ ಗುರಿ
* 65 % :ನವೆಂಬರ್ವರೆಗಿನ ವೆಚ್ಚದ ಪ್ರಮಾಣ
*₹ 2 ಲಕ್ಷ ಕೋಟಿ :ವೆಚ್ಚದಲ್ಲಿನ ಖೋತಾ ಪ್ರಮಾಣ
*7 % :ವಾರ್ಷಿಕ ವೆಚ್ಚದಲ್ಲಿನ ಒಟ್ಟು ಕಡಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.