ADVERTISEMENT

ಖರೀದಿ ಕೇಂದ್ರದ ನಿರೀಕ್ಷೆಯಲ್ಲಿ ಬೆಳೆಗಾರ

ಕಡಲೆಕಾಳು ಕೊಯ್ಲು ಶುರುವಾಗಿ ಒಂದೂವರೆ ತಿಂಗಳು

ವೆಂಕಟೇಶ ಜಿ.ಎಚ್.
Published 12 ಫೆಬ್ರುವರಿ 2021, 19:06 IST
Last Updated 12 ಫೆಬ್ರುವರಿ 2021, 19:06 IST
ಹುನಗುಂದ–ತಿಮ್ಮಾಪುರ ರಸ್ತೆಯಲ್ಲಿ ಕಡಲೆ ಗಿಡ ಒಕ್ಕದೇ ಕಣದಲ್ಲಿ ಹಾಗೆಯೇ ಇಟ್ಟಿರುವ ರೈತರು
ಹುನಗುಂದ–ತಿಮ್ಮಾಪುರ ರಸ್ತೆಯಲ್ಲಿ ಕಡಲೆ ಗಿಡ ಒಕ್ಕದೇ ಕಣದಲ್ಲಿ ಹಾಗೆಯೇ ಇಟ್ಟಿರುವ ರೈತರು   

ಬಾಗಲಕೋಟೆ: ಕೊಯ್ಲಿನ ಹಂಗಾಮು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಸರ್ಕಾರ, ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿಗೆ ಮುಂದಾಗುತ್ತಿಲ್ಲ. ಇದು ಜಿಲ್ಲೆಯ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಹಿಂಗಾರುಹಂಗಾಮಿನಲ್ಲಿ ಉತ್ತಮ ಮಳೆಯಾ ಗಿದ್ದು, ಕಡಲೆಕಾಳು ಇಳುವರಿಯೂ ಚೆನ್ನಾಗಿದೆ. ಕೃಷಿ ಇಲಾಖೆ ಮಾಹಿತಿ ಅನ್ವಯ ಈ ಬಾರಿ 1,13,986 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,400 ಹೆಕ್ಟೇರ್ ಬಿತ್ತನೆ ಪ್ರದೇಶ ಈ ಬಾರಿ ಹೆಚ್ಚಳವಾಗಿದೆ.

ಈಗಾಗಲೇ ಕಟಾವು ಆರಂಭವಾಗಿದ್ದು, ಮಾರುಕಟ್ಟೆಗೆ ಕಡಲೆಕಾಳು ಆವಕ ಶುರುವಾಗಿದೆ. ಜನವರಿ 1ರಿಂದ ಫೆಬ್ರುವರಿ 11 ರವರೆಗೆಬಾಗಲಕೋಟೆ ಎಪಿಎಂಸಿಗೆ 1,876 ಕ್ವಿಂಟಲ್ ಕಡಲೆಕಾಳು ಆವಕಗೊಂಡಿದೆ.

ADVERTISEMENT

ಹಾಳಾಗುವ ಭೀತಿ: ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ಕಡಲೆಗೆ ಪ್ರತಿ ಕ್ವಿಂಟಲ್‌ಗೆ ₹5,100 ದರ ನಿಗದಿಪಡಿಸಿದೆ. ಆದರೆ ಮಾರುಕಟ್ಟೆ
ಯಲ್ಲಿ ಈಗ ಪ್ರತಿ ಕ್ವಿಂಟಲ್‌ಗೆ ₹3,600 ಇದೆ. ಹೀಗಾಗಿ ರೈತರು ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭವಾಗುವ ನಿರೀಕ್ಷೆಯಲ್ಲಿದ್ದಾರೆ.

ಕಡಲೆಕಾಳು ಒಕ್ಕಿ ಕಣದಲ್ಲಿ ರಾಶಿ ಮಾಡಿಕೊಂಡು ಕುಳಿತಿದ್ದಾರೆ. ಕಾಳು ಹೆಚ್ಚು ದಿನ ಸಂಗ್ರಹಿಸಿಟ್ಟರೆ ಹುಳು ಬರುತ್ತದೆ. ಪುಡಿ ಆಗಿ ತೂಕ ಕಳೆದುಕೊಳ್ಳುತ್ತದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.

‘ಹಂಗಾಮು ಆರಂಭವಾದಾಗ ಸರ್ಕಾರ ಖರೀದಿ ಕೇಂದ್ರ ತೆರೆಯುವುದಿಲ್ಲ. ಬದಲಿಗೆ ನಾವು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ನಮ್ಮಲ್ಲಿ ಕಾಳು ಮುಗಿದ ಮೇಲೆ ಖರೀದಿ ಪ್ರಕ್ರಿಯೆ ಆರಂಭಿಸುತ್ತಾರೆ. ನಮ್ಮಿಂದ ಕಡಲೆಕಾಳು ಕೊಂಡುಕೊಂಡ ವರ್ತಕರು ಇದರ ಉಪಯೋಗ ಪಡೆಯುತ್ತಾರೆ. ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸಿ ಖರೀದಿ
ಕೇಂದ್ರ ಪ್ರಾರಂಭಿಸಲಿ’ ಎಂದು ಹುನಗುಂದ ತಾಲ್ಲೂಕಿನ ಹಿರೇಮಾಗಿಯ ಬೆಳೆಗಾರ ಗಂಗಾಧರ ಮೇಟಿ ಒತ್ತಾಯಿಸಿದರು.

***

ಕಡಲೆಕಾಳು ಖರೀದಿಗೆ ಕೇಂದ್ರ ಸರ್ಕಾರದಿಂದ ಇನ್ನೂ ಆದೇಶ ಬಂದಿಲ್ಲ.ಅನುಮತಿ ನೀಡುವಂತೆ ರಾಜ್ಯ ಕಚೇರಿಯಿಂದ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ

- ಎನ್.ಎ.ಲಕ್ಕುಂಡಿ,ಬಾಗಲಕೋಟೆ ಎಪಿಎಂಸಿ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.