ನವದೆಹಲಿ:‘ತೆರಿಗೆ ಬಾಕಿ, ರಿಟರ್ನ್ಸ್ ಸಲ್ಲಿಕೆಯಲ್ಲಿ ಲೋಪ ಅಥವಾ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ತಪ್ಪಾಗಿದ್ದರೆ ಆ ಕುರಿತು ಸಂಬಂಧಪಟ್ಟ ಸಂಸ್ಥೆಯ ಪ್ರವರ್ತಕರು, ನಿರ್ದೇಶಕರಿಗೆ ಸ್ವಯಂಚಾಲಿತವಾಗಿ ಎಸ್ಎಂಎಸ್ ರವಾನೆಯಾಗಲಿದೆ’ ಎಂದು ಜಿಎಸ್ಟಿಎನ್ನ ಸಿಇಒ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.
‘ಈ ವ್ಯವಸ್ಥೆಯನ್ನುಜಿಎಸ್ಟಿ ನೆಟ್ವರ್ಕ್ ಅಭಿವೃದ್ಧಿಪಡಿಸಿದೆ. ಜಿಎಸ್ಟಿ ವ್ಯವಸ್ಥೆಯು ಎಚ್ಚರಿಕೆ ಸಂದೇಶವನ್ನುಸೃಷ್ಟಿಸಿದರೆ,ಈ ಮಾಹಿತಿಯು ರೆವಿನ್ಯೂ ಇಲಾಖೆಗೂ ಹೋಗಲಿದೆ. ಆಗ ಸೂಕ್ತ ಕ್ರಮ ಕೈಗೊಳ್ಳುವಂತೆ ತೆರಿಗೆ ಅಧಿಕಾರಿಗಳಿಗೆ ಸೂಚನೆ ದೊರೆಯುತ್ತದೆ’ ಎಂದೂ ಹೇಳಿದ್ದಾರೆ.
‘ಜಿಎಸ್ಟಿಆರ್–3ಬಿ ಮತ್ತು ಜಿಎಸ್ಟಿಆರ್–1, ಜಿಎಸ್ಟಿಆರ್–3ಬಿ ಮತ್ತು ಇ–ವೇ ಬಿಲ್ಗಳ ಮಧ್ಯೆ ವ್ಯತ್ಯಾಸ ಇದ್ದರೆ ಅಧಿಕೃತವಾಗಿ ಸಹಿ ಮಾಡಿರುವವರಿಗೆ ಮಾತ್ರವೇ ಎಸ್ಎಂಎಸ್ ರವಾನೆಯಾಗುವ ವ್ಯವಸ್ಥೆ ಸದ್ಯಕ್ಕೆ ಜಾರಿಯಲ್ಲಿದೆ. ರಿಟರ್ನ್ಸ್ ಸಲ್ಲಿಕೆ ಗಡುವಿಗಿಂತಲೂ ಮೂರು ದಿನ ಮುಂಚಿತವಾಗಿ ಎಸ್ಎಂಎಸ್ ಹೋಗಲಿದೆ.
‘ಬಹಳಷ್ಟು ಸಂದರ್ಭಗಳಲ್ಲಿ ರಿಟರ್ನ್ಸ್, ತೆರಿಗೆ ಪಾವತಿಯ ವಿಷಯಗಳುಸಂಸ್ಥೆಯ ಪ್ರವರ್ತಕರ ಗಮನಕ್ಕೆ ಬಂದಿರುವುದಿಲ್ಲ. ಏಕೆಂದರೆ ಅದಕ್ಕೆಂದೇ ಲೆಕ್ಕಪತ್ರ ಅಧಿಕಾರಿ ಅಥವಾ ಸಿಎಫ್ಒ ನೇಮಕ ಮಾಡಿಕೊಳ್ಳಲಾಗಿರುತ್ತದೆ. ಆದರೆ, ಜಿಎಸ್ಟಿ ವ್ಯವಸ್ಥೆಯಲ್ಲಿ ಪ್ರವರ್ತಕರಿಗೂ ಎಸ್ಎಂಎಸ್ ಕಳುಹಿಸಲಾಗುವುದು. ಇದರಿಂದ ರಿಟರ್ನ್ಸ್ ಸಲ್ಲಿಕೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಅನುಕೂಲವಾಗಲಿದೆ.
‘ಸತತ ಎರಡು ತಿಂಗಳವರೆಗೆ ಜಿಎಸ್ಟಿಆರ್–3ಬಿ ಸಲ್ಲಿಸದೇ ಇರುವ ಉದ್ದಿಮೆಗಳಿಗೆ ಇ–ವೇ ಬಿಲ್ ಸೃಷ್ಟಿಸಲು ಸಾಧ್ಯವಾಗದೇ ಇರುವಂತೆ ತಡೆ ಹಿಡಿಯಲಾಗುವುದು. ಇದು 2019ರ ಆಗಸ್ಟ್ 22ರಿಂದ ಜಾರಿಗೆ ಬರಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.