ನವದೆಹಲಿ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವರಮಾನ ಸಂಗ್ರಹದಲ್ಲಿ ಗಮನಾರ್ಹ ಏರಿಕೆ ಕಂಡು ಬರುತ್ತಿದ್ದಂತೆ, ತೆರಿಗೆ ದರಗಳನ್ನು ಇನ್ನಷ್ಟು ಸರಳೀಕರಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ.
‘ಜಿಎಸ್ಟಿಗೆ ಹದಿನೆಂಟು ತಿಂಗಳು’ ಹೆಸರಿನಡಿ ಫೇಸ್ಬುಕ್ನಲ್ಲಿ ಬರೆದಿರುವ ಲೇಖನದಲ್ಲಿ ಜೇಟ್ಲಿ ತಿಳಿಸಿದ್ದಾರೆ.
ದೇಶಿ ತೆರಿಗೆ ವ್ಯವಸ್ಥೆಯು ‘ಜಿಎಸ್ಟಿ’ಗೆ ಪರಿವರ್ತನೆಯಾದ ಪ್ರಕ್ರಿಯೆ ಪೂರ್ಣಗೊಂಡಿರುವ ಈ ಕಾಲಘಟ್ಟದಲ್ಲಿ, ತೆರಿಗೆ ದರ ಸರಳೀಕರಣದ ಮೊದಲ ಭಾಗ ಪೂರ್ಣಗೊಳಿಸುವ ಹಂತದಲ್ಲಿ ಇದ್ದೇವೆ’ ಎಂದು ತಿಳಿಸಿದ್ದಾರೆ.
‘ದಿನಬಳಕೆಯ ಗರಿಷ್ಠ ಸಂಖ್ಯೆಯ ಸರಕುಗಳ ಮೇಲಿನ ಸದ್ಯದ ಶೇ 12 ಮತ್ತು ಶೇ 18ರ ದರಗಳ ಮಧ್ಯೆ ಹೊಸ ದರ (ಸ್ಟ್ಯಾಂಡರ್ಡ್ ಜಿಎಸ್ಟಿ) ನಿಗದಿಪಡಿಸುವ ಬಗ್ಗೆ ಭವಿಷ್ಯದ ಮುನ್ನೋಟ ನಿಗದಿಪಡಿಸಲಾಗುವುದು‘ ಎಂದರು.
‘ವಿಲಾಸಿ ಸರಕುಗಳು, ವಾಹನ ಬಿಡಿಭಾಗ, ಏರ್ ಕಂಡಿಷನರ್, ಸಿಮೆಂಟ್ ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಪರಿಭಾವಿಸಲಾಗಿರುವ ತಂಬಾಕು, ಪಾನ್ ಮಸಾಲಾ ಮತ್ತಿತರ ಕೆಲವೇ ಉತ್ಪನ್ನಗಳು ಸದ್ಯಕ್ಕೆ ಶೇ 28ರ ದರದ ವ್ಯಾಪ್ತಿಯಲ್ಲಿ ಇವೆ. ವಿಲಾಸಿ ಮತ್ತು ಆರೋಗ್ಯಕ್ಕೆ ಹಾನಿಕರವಾದ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದೆಲ್ಲ ಸರಕುಗಳನ್ನು ಶೇ 28ರ ದರದ ವ್ಯಾಪ್ತಿಯಿಂದ ಕೈಬಿಡಲಾಗುವುದು ಎಂದು
ಹೇಳಿದರು.
* ಅವಶ್ಯಕ ಸರಕುಗಳಿಗೆ ಅನ್ವಯಿಸಿರುವ ಶೇ 0, ಶೇ 5 ಮತ್ತು ವಿಲಾಸಿ ಸರಕುಗಳ ಮೇಲಿನ ಗರಿಷ್ಠ ದರಗಳಿಗೆ ಪೂರಕವಾಗಿ ಈ ಹೊಸ ದರ ಇರಲಿದೆ.
-ಅರುಣ್ ಜೇಟ್ಲಿ, ಹಣಕಾಸು ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.