
ಐಡಿಎಫ್ಸಿ ಫಸ್ಟ್ ಬ್ಯಾಂಕ್
ಮುಂಬೈ: ಹರಿಯಾಣ ಸರ್ಕಾರದ ಖಾತೆಗಳಲ್ಲಿ ಒಟ್ಟು ₹590 ಕೋಟಿ ಮೊತ್ತದ ವಂಚನೆ ನಡೆದಿದೆ, ವಂಚನೆಯನ್ನು ತನ್ನ ನೌಕರರು ಎಸಗಿದ್ದಾರೆ ಎಂದು ಖಾಸಗಿ ವಲಯದ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಭಾನುವಾರ ಹೇಳಿದೆ.
ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಲಾಗಿದೆ, ಆರ್ಬಿಐಗೆ ಮಾಹಿತಿ ಕೊಡಲಾಗಿದೆ ಎಂದು ಬ್ಯಾಂಕ್ ಷೇರುಪೇಟೆಗೆ ಹೇಳಿದೆ.
‘ಚಂಡೀಗಢದ ನಿರ್ದಿಷ್ಟ ಶಾಖೆ ಒಂದರಲ್ಲಿ ನೌಕರರು ವಂಚನೆಯ ಚಟುವಟಿಕೆಗಳನ್ನು ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹರಿಯಾಣ ಸರ್ಕಾರಕ್ಕೆ ಸೇರಿದ ಖಾತೆಗಳಲ್ಲಿ ಈ ಚಟುವಟಿಕೆಗಳು ನಡೆದಿವೆ. ಇದರಲ್ಲಿ ಇತರರೂ ಭಾಗಿಯಾಗಿರುವ ಸಾಧ್ಯತೆ ಇದೆ’ ಎಂದು ಐಡಿಎಫ್ಸಿ ಫಸ್ಟ್ ಬ್ಯಾಂಕ್ ಷೇರುಪೇಟೆಗೆ ನೀಡಿರುವ ವಿವರದಲ್ಲಿ ಉಲ್ಲೇಖಿಸಿದೆ.
ಇನ್ನಷ್ಟು ಮಾಹಿತಿ ದೊರೆತ ನಂತರದಲ್ಲಿ ವಂಚನೆಯ ಮೊತ್ತ ಎಷ್ಟು ಎಂಬುದು ನಿಖರವಾಗುತ್ತದೆ ಎಂದು ಅದು ಹೇಳಿದೆ.
ಹರಿಯಾಣ ಸರ್ಕಾರವು ತನ್ನ ಜೊತೆ ಬ್ಯಾಂಕಿಂಗ್ ವಹಿವಾಟು ನಡೆಸುತ್ತಿದೆ. ಖಾತೆಯೊಂದನ್ನು ಮುಚ್ಚಿ, ಉಳಿದಿರುವ ಮೊತ್ತವನ್ನು ಇನ್ನೊಂದು ಬ್ಯಾಂಕ್ಗೆ ವರ್ಗಾವಣೆ ಮಾಡಬೇಕು ಎಂಬ ಕೋರಿಕೆ ಬಂತು. ಖಾತೆ ಮುಚ್ಚಿ, ಮೊತ್ತ ವರ್ಗಾಯಿಸುವ ಪ್ರಕ್ರಿಯೆಯಲ್ಲಿ, ಉಲ್ಲೇಖಿತ ಮೊತ್ತ ಹಾಗೂ ಖಾತೆಯಲ್ಲಿ ಇದ್ದ ಮೊತ್ತದ ವಿಚಾರವಾಗಿ ಕೆಲವು ಲೋಪಗಳು ಕಂಡುಬಂದಿವೆ ಎಂದು ಐಡಿಎಫ್ಸಿ ಫಸ್ಟ್ ಬ್ಯಾಂಕ್ ತಿಳಿಸಿದೆ.
ಬ್ಯಾಂಕ್ನ ನಾಲ್ವರು ಅಧಿಕಾರಿಗಳನ್ನು ಅಮಾನತಿನಲ್ಲಿ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.