ನವದೆಹಲಿ: ಜನರ ಖರೀದಿ ಸಾಮರ್ಥ್ಯ ಮತ್ತು ಬಂಡವಾಳ ಹೂಡಿಕೆಯು ಇನ್ನೂ ಚೇತರಿಸಿಕೊಂಡಿಲ್ಲದ ಕಾರಣ, ದೇಶದ ಆರ್ಥಿಕ ಬೆಳವಣಿಗೆಯು ಸದ್ಯ ಬಹಳ ದುರ್ಬಲವಾದ ಸ್ಥಿತಿಯಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯ ಜಯಂತ್ ಆರ್. ವರ್ಮ ಹೇಳಿದ್ದಾರೆ.
ಆರ್ಥಿಕತೆಗೆ ಎಲ್ಲ ರೀತಿಯ ಬೆಂಬಲದ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.
ರಫ್ತು, ಸರ್ಕಾರದ ವೆಚ್ಚ, ಬಂಡವಾಳ ಹೂಡಿಕೆ ಮತ್ತು ಜನರ ಖರೀದಿ ಸಾಮರ್ಥ್ಯವು ದೇಶದ ಆರ್ಥಿಕ ಬೆಳವಣಿಗೆಗೆ ಪ್ರಮುಖವಾದ ನಾಲ್ಕು ಚಾಲಕ ಶಕ್ತಿಗಳಾಗಿವೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ರಫ್ತು ಮತ್ತು ಸರ್ಕಾರದ ವೆಚ್ಚವು ಆರ್ಥಿಕತೆಗೆ ಬೆಂಬಲ ನೀಡಿದೆ. ಆದರೆ, ಬಂಡವಾಳ ಹೂಡಿಕೆ ಮತ್ತು ಜನರ ಖರೀದಿ ಸಾಮರ್ಥ್ಯವು ಚೇತರಿಕೆ ಕಂಡುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಆರ್ಥಿಕತೆಯು ಮಂದಗತಿಯಲ್ಲಿ ಇರುವುದರಿಂದ ರಫ್ತು ವಹಿವಾಟು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿ ಆಗಿಲ್ಲ. ವಿತ್ತೀಯ ಮಿತಿಗಳಿಂದಾಗಿ ಸರ್ಕಾರದ ವೆಚ್ಚವು ಸೀಮಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಬೇರೆ ದೇಶಗಳಂತೆ ಭಾರತವು ಆರ್ಥಿಕ ಹಿಂಜರಿತದ ಅಪಾಯವನ್ನು ಎದುರಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.