ADVERTISEMENT

ತ್ವರಿತವಾಗಿ ಚೇತರಿಕೆ ಕಂಡ ಆರ್ಥಿಕತೆ: ಸಿಇಒ ಅನಂತ ನಾಗೇಶ್ವರನ್

ಪಿಟಿಐ
Published 11 ಜೂನ್ 2022, 19:31 IST
Last Updated 11 ಜೂನ್ 2022, 19:31 IST
ಜಿಡಿಪಿ (ಸಾಂದರ್ಭಿಕ ಚಿತ್ರ)
ಜಿಡಿಪಿ (ಸಾಂದರ್ಭಿಕ ಚಿತ್ರ)   

ಗುರುಗ್ರಾಮ: ಭಾರತದ ಆರ್ಥಿಕತೆಯು ಕೋವಿಡ್‌–19 ಸಾಂಕ್ರಾಮಿಕವು ಸೃಷ್ಟಿಸಿದ ಬಿಕ್ಕಟ್ಟಿನಿಂದ ಅತ್ಯಂತ ವೇಗವಾಗಿ ಚೇತರಿಕೆ ಕಂಡುಕೊಂಡಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅನಂತ ನಾಗೇಶ್ವರನ್ ಹೇಳಿದ್ದಾರೆ.

ಹರಿಯಾಣದ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ (ಎಚ್‌ಐಪಿಎ) ನಡೆದ ‘ಭಾರತದ ಆರ್ಥಿಕತೆ: ನಿರೀಕ್ಷೆ, ಸವಾಲುಗಳು ಮತ್ತು ಕಾರ್ಯಸೂಚಿ’ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು. ಪ್ರಮುಖಆರ್ಥಿಕ ಚಟುವಟಿಕೆಗಳು ಹಾಗೂ ಅಂಶಗಳು ಕೋವಿಡ್‌ಗೂ ಮುಂಚಿನ ಮಟ್ಟವನ್ನು ದಾಟಿವೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ನೀತಿಯ ಹಂತದಲ್ಲಿ ತ್ವರಿತ ಮತ್ತು ನಿಖರವಾದ ಕ್ರಮಗಳನ್ನು ತೆಗೆದುಕೊಂಡಿದೆ. ಸಕಾಲಕ್ಕೆ ಆರ್‌ಬಿಐ ಮಧ್ಯಪ್ರವೇಶದಿಂದಾಗಿ ಸರ್ಕಾರ ತೆಗದುಕೊಂಡ ಕ್ರಮಗಳಿಗೆ ಬೆಂಬಲ ದೊರೆತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದ ಆರ್ಥಿಕತೆಯು ಹಲವು ದೃಷ್ಟಿಯಿಂದ ದೃಢ ಮತ್ತು ಸ್ತಿರವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು ಕನಿಷ್ಠ ಹಣದುಬ್ಬರದಿಂದ ಗರಿಷ್ಠ ಹಣದುಬ್ಬರದತ್ತ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಹಣದುಬ್ಬರವನ್ನು ಒತ್ತಡವನ್ನು ನಿಯಂತ್ರಣದಲ್ಲಿ ಇಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಅಂದಾಜಿನಂತೆಯೇ ಭಾರತದ ಜಿಡಿಪಿ ಗಾತ್ರವು 2027ರ ಒಳಗಾಗಿ ₹ 385 ಲಕ್ಷ ಕೋಟಿಯನ್ನು ತಲುಪುವ ವಿಶ್ವಾಸ ಇದೆ ಎಂದು ನಾಗೇಶ್ವರನ್ ಹೇಳಿದ್ದಾರೆ.

ಖಾಸಗಿ ಹೂಡಿಕೆಯಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ. ಅಂತರರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಆಗುವ ಏರಿಳಿತವನ್ನು ಎದುರಿಸಲು ಅಗತ್ಯವಾದ ವಿದೇಶಿ ವಿನಿಮಯ ಸಂಗ್ರಹವನ್ನು ದೇಶವು ಹೊಂದಿದೆ ಎಂದಿದ್ದಾರೆ.

ಕೋವಿಡ್‌–19 ಸಾಂಕ್ರಾಮಿಕದ ಮೂರು ಅಲೆಗಳು ಬಂದರೂ ಭಾರತದ ಆರ್ಥಿಕತೆಯು ಉತ್ತಮ ಚೇತರಿಕೆ ಕಂಡುಕೊಂಡಿದೆ ಎಂದು ಅಮೆರಿಕದ ಟ್ರಷರಿ ಹೇಳಿದೆ.

ಎರಡನೇ ಅಲೆಯು 2021ರ ಮಧ್ಯಭಾಗದವರೆಗೂ ಬೆಳವಣಿಗೆಯ ಮೇಲೆ ತೀವ್ರ ತರಹದ ಪರಿಣಾಮ ಬೀರಿತು. ಇದರಿಂದಾಗಿ ಆರ್ಥಿಕ ಚೇತರಿಕೆಯು ವಿಳಂಬ ಆಯಿತು. ಆದರೆ, 2021ರ ಎರಡನೇ ಭಾಗದಲ್ಲಿ ಲಸಿಕೆ ನೀಡುವ ಕಾರ್ಯ ಚುರುಕುಗೊಂಡ ಬಳಿಕ ಆರ್ಥಿಕ ಚೇತರಿಕೆಗೆ ವೇಗ ದೊರೆಯಿತು ಎಂದು ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.