ನವದೆಹಲಿ: ಭಾರತದ ಒಟ್ಟು ಆರ್ಥಿಕ ವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿ ಇದೆಯಾದರೂ, ಮೇಲ್ಮಟ್ಟದಲ್ಲಿ ಮಾತ್ರ ಬೆಳವಣಿಗೆ ಕಂಡುಬರುತ್ತಿದೆ ಎಂದು ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಸು ಅವರು ಯುಪಿಎ ಆಡಳಿತ ಅವಧಿಯಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದ್ದರು. ‘ಆರ್ಥಿಕ ಬೆಳವಣಿಗೆಯು ಮೇಲಿನ ಹಂತದಲ್ಲಿ ಮಾತ್ರ ಕೇಂದ್ರೀಕೃತ ಆಗಿರುವುದು ಕಳವಳಕಾರಿ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಯುವಕರು ನಿರುದ್ಯೋಗಿಗಳಾಗಿರುವ ಪ್ರಮಾಣವು ಕೋವಿಡ್ಗೂ ಮೊದಲೇ ದೇಶದಲ್ಲಿ ಶೇಕಡ 23ಕ್ಕೆ ತಲುಪಿತ್ತು. ಕಾರ್ಮಿಕರು, ರೈತರು, ಸಣ್ಣ ಉದ್ಯಮಗಳಲ್ಲಿ ತೊಡಗಿಸಿಕೊಂಡವರು ಹಿಮ್ಮುಖ ಚಲನೆ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.
ದೇಶದ ಅರ್ಥ ವ್ಯವಸ್ಥೆಯಲ್ಲಿ ಹೆಚ್ಚಿನ ಹಣದುಬ್ಬರ ಹಾಗೂ ಹೆಚ್ಚಿನ ನಿರುದ್ಯೋಗ ಇದೆ. ಇದನ್ನು ಸರಿಪಡಿಸಲು, ಬಹಳ ಜಾಗರೂಕವಾಗಿ ನಿಯಮಗಳನ್ನು ರೂಪಿಸಬೇಕು. ಎರಡು ವರ್ಷಗಳಲ್ಲಿ ಕುಟುಂಬಗಳ ತಲಾವಾರು ಆದಾಯ ಇಳಿಕೆ ಆಗಿದೆ. ಇದೇ ಸಂದರ್ಭದಲ್ಲಿ ಹಣದುಬ್ಬರ ದರವು ಶೇ 5ರಷ್ಟು ಇದೆ. ಉದ್ಯೋಗ ಸೃಷ್ಟಿಸುವುದು, ಸಣ್ಣ ಉದ್ದಿಮೆಗಳಿಗೆ ನೆರವು ಒದಗಿಸುವುದು, ಉತ್ಪಾದಕತೆ ಹೆಚ್ಚಿಸುವುದು ಈಗಿನ ದೊಡ್ಡ ಸವಾಲುಗಳು ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.