ಟಾಟಾ
ನವದೆಹಲಿ: ದೇಶದ ಅತ್ಯಂತ ಮೌಲ್ಯಯುತವಾದ ಉದ್ಯಮ ಸಮೂಹದ ಮೇಲೆ ನಿಯಂತ್ರಣ ಹೊಂದಿರುವ ಟಾಟಾ ಟ್ರಸ್ಟ್ಸ್ಗಳ ಟ್ರಸ್ಟಿಗಳ ನಡುವೆ ಸಂಘರ್ಷ ಶುರುವಾಗಿದೆ. ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳು, ಆಡಳಿತ ಮಂಡಳಿಗೆ ನೇಮಕಾತಿಗಳು ಇದಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.
ಟಾಟಾ ಸಮೂಹದ ಕಂಪನಿಗಳ ಮಾಲೀಕತ್ವ ಹೊಂದಿರುವ ಟಾಟಾ ಸನ್ಸ್ನಲ್ಲಿ ಟಾಟಾ ಟ್ರಸ್ಟ್ಸ್ಟ್ ಶೇಕಡ 66ರಷ್ಟು ಪಾಲು ಹೊಂದಿದೆ.
ಟಾಟಾ ಟ್ರಸ್ಟ್ಸ್ನಲ್ಲಿ ಎರಡು ಗುಂಪುಗಳಾಗಿವೆ, ಒಂದು ಗುಂಪು ಟ್ರಸ್ಟ್ಸ್ನ ಅಧ್ಯಕ್ಷ ನೋಯಲ್ ಟಾಟಾ ಅವರೊಂದಿಗೆ ಗುರುತಿಸಿಕೊಂಡಿದೆ. ನಾಲ್ಕು ಮಂದಿ ಟ್ರಸ್ಟಿಗಳ ಇನ್ನೊಂದು ಗುಂಪು ಮೆಹ್ಲಿ ಮಿಸ್ತ್ರಿ ಅವರೊಂದಿಗೆ ಗುರುತಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.
ಮಿಸ್ತ್ರಿ ಅವರು ಶಾಪೂರ್ಜಿ ಪಲ್ಲೊಂಜಿ ಕುಟುಂಬದ ಜೊತೆ ನಂಟು ಹೊಂದಿದ್ದಾರೆ, ಈ ಕುಟುಂಬವು ಟಾಟಾ ಸನ್ಸ್ನಲ್ಲಿ ಶೇ 18.37ರಷ್ಟು ಷೇರುಪಾಲು ಹೊಂದಿದೆ. ಪ್ರಮುಖ ವಿಚಾರಗಳಲ್ಲಿ ತಮಗೆ ಮಾಹಿತಿ ಒದಗಿಸುತ್ತಿಲ್ಲ ಎಂದು ಮಿಸ್ತ್ರಿ ಅವರು ಭಾವಿಸಿದ್ದಾರೆ ಎನ್ನಲಾಗಿದೆ.
ಬಿಕ್ಕಟ್ಟು ಶುರುವಾಗಲು ಮೂಲ ಕಾರಣ ಟಾಟಾ ಸನ್ಸ್ನ ಆಡಳಿತ ಮಂಡಳಿಯ ಸ್ಥಾನ ಎಂದು ಮೂಲವೊಂದು ತಿಳಿಸಿದೆ. ಟಾಟಾ ಸಮೂಹದ ಸರಿಸುಮಾರು 400 ಕಂಪನಿಗಳ ಮೇಲೆ ಟಾಟಾ ಸನ್ಸ್ ನಿಯಂತ್ರಣ ಹೊಂದಿದೆ. ಈ 400 ಕಂಪನಿಗಳಲ್ಲಿ 30 ಕಂಪನಿಗಳು ಷೇರುಪೇಟೆಯಲ್ಲಿ ನೋಂದಾಯಿತವಾಗಿವೆ.
ಟಾಟಾ ಟ್ರಸ್ಟ್ಸ್ನ ಆರು ಮಂದಿ ಟ್ರಸ್ಟಿಗಳ ಸಭೆಯೊಂದರಲ್ಲಿ ಬಿಕ್ಕಟ್ಟು ಶುರುವಾಯಿತು. ಟಾಟಾ ಟ್ರಸ್ಟ್ಸ್ ಎಂಬುದು ದಾನ ಕಾರ್ಯದಲ್ಲಿ ತೊಡಗಿರುವ ಹಲವು ಟ್ರಸ್ಟ್ಗಳ ಒಕ್ಕೂಟದಂತಿದೆ. ಸೆಪ್ಟೆಂಬರ್ 11ರಂದು ನಡೆದ ಈ ಸಭೆಯು ಟಾಟಾ ಸನ್ಸ್ ಆಡಳಿತ ಮಂಡಳಿಗೆ ವಿಜಯ್ ಸಿಂಗ್ ಅವರನ್ನು ನಿರ್ದೇಶಕರನ್ನಾಗಿ ಮರುನೇಮಕ ಮಾಡುವುದನ್ನು ಪರಿಗಣಿಸುವ ಕಾರ್ಯಸೂಚಿಯನ್ನು ಹೊಂದಿತ್ತು. ಟಾಟಾ ಟ್ರಸ್ಟ್ಸ್ನಲ್ಲಿ ಏಳು ಮಂದಿ ಟ್ರಸ್ಟಿಗಳು ಇದ್ದಾರೆ. ಸಿಂಗ್ ಅವರೂ ಒಬ್ಬ ಟ್ರಸ್ಟಿ.
ಸಿಂಗ್ ಅವರ ಮರುನೇಮಕದ ಪ್ರಸ್ತಾವವನ್ನು ಟ್ರಸ್ಟ್ಸ್ನ ಅಧ್ಯಕ್ಷ ನೋಯಲ್ ಟಾಟಾ ಮತ್ತು ವೇಣು ಶ್ರೀನಿವಾಸನ್ (ಟಿವಿಎಸ್ ಸಮೂಹದ ಗೌರವಾಧ್ಯಕ್ಷ) ಅವರು ಸಭೆಯಲ್ಲಿ ಮಂಡಿಸಿದರು. ಆದರೆ ಇದಕ್ಕೆ ಮೆಹ್ಲಿ ಮಿಸ್ತ್ರಿ, ಪ್ರಮಿತ್ ಝಾವೆರಿ, ಜೆಹಾಂಗಿರ್ ಎಚ್ಸಿ ಜೆಹಾಂಗಿರ್ ಮತ್ತು ಡೇರಿಯಸ್ ಖಂಬಾಟ ವಿರೋಧ ವ್ಯಕ್ತಪಡಿಸಿದರು. ಹೀಗಿ ಪ್ರಸ್ತಾವ ತಿರಸ್ಕೃತಗೊಂಡಿತು.
ಇದಾದ ನಂತರ ನಾಲ್ಕು ಮಂದಿ ಟ್ರಸ್ಟಿಗಳು ಮೆಹ್ಲಿ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಆಡಳಿತ ಮಂಡಳಿಗೆ ನೇಮಕ ಮಾಡುವ ಪ್ರಸ್ತಾವ ಮಂಡಿಸಿದರು. ಆದರೆ ಇದಕ್ಕೆ ನೋಯಲ್ ಟಾಟಾ ಮತ್ತು ವೇಣು ಶ್ರೀನಿವಾಸನ್ ವಿರೋಧ ದಾಖಲಿಸಿದರು. ನಂತರದಲ್ಲಿ ಸಿಂಗ್ ಅವರು ಟಾಟಾ ಸನ್ಸ್ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದರು.
ಟಾಟಾ ಟ್ರಸ್ಟ್ಸ್ನ ಇನ್ನೊಂದು ಸಭೆಯು ಇದೇ 10ರಂದು ನಡೆಯಲಿದೆ. ಅದರ ಕಾರ್ಯಸೂಚಿ ಗೊತ್ತಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಲು ಟಾಟಾ ಟ್ರಸ್ಟ್ಸ್, ಟಾಟಾ ಸನ್ಸ್ ನಿರಾಕರಿಸಿವೆ. ವೇಣು ಶ್ರೀನಿವಾಸನ್ ಅವರೂ ಪ್ರತಿಕ್ರಿಯೆ ನೀಡಿಲ್ಲ. ಮೆಹ್ಲಿ ಮಿಸ್ತ್ರಿ ಅವರಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.
ಕೇಂದ್ರ ಸರ್ಕಾರದ ಮಧ್ಯಪ್ರವೇಶ?
ಟಾಟಾ ಟ್ರಸ್ಟ್ಸ್ನಲ್ಲಿನ ಒಳಜಗಳವು ಉದ್ಯಮ ಸಮೂಹದ ಕೆಲಸಗಳ ಮೇಲೆ ಪರಿಣಾಮ ಉಂಟುಮಾಡುವ ಭೀತಿ ಎದುರಾಗಿರುವ ಕಾರಣದಿಂದಾಗಿ ಕೇಂದ್ರ ಸರ್ಕಾರದ ಮಧ್ಯಪ್ರವೇಶವು ಅನಿವಾರ್ಯವಾಗಿದೆ ಎಂದು ಮೂಲಗಳು ಹೇಳಿವೆ.
‘ಟಾಟಾ ಸಮೂಹವು ದೇಶದ ಅರ್ಥ ವ್ಯವಸ್ಥೆಯ ಪಾಲಿಗೆ ಎಷ್ಟೊಂದು ಮಹತ್ವದ್ದು ಎಂಬುದನ್ನು ಪರಿಗಣಿಸಿದಾಗ ಒಬ್ಬ ವ್ಯಕ್ತಿಗೆ ಅದರ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ನೀಡಬಹುದೇ ಎಂಬುದು ಸರ್ಕಾರದ ಮುಂದಿರುವ ಮುಖ್ಯ ಪ್ರಶ್ನೆಯಾಗಿದೆ’ ಎಂದು ಮೂಲವೊಂದು ಹೇಳಿದೆ. ಟಾಟಾ ಸನ್ಸ್ ಕಂಪನಿಯನ್ನು ಸೆಪ್ಟೆಂಬರ್ 30ಕ್ಕೆ ಮೊದಲು ಷೇರುಪೇಟೆಯಲ್ಲಿ ನೋಂದಾಯಿಸಬೇಕು ಎಂದು ಆರ್ಬಿಐ ಗಡುವು ವಿಧಿಸಿತ್ತು. ಆದರೆ ಇದರಿಂದ ವಿನಾಯಿತಿ ನೀಡುವಂತೆ ಕೋರಿ ಟಾಟಾ ಸನ್ಸ್ ಅರ್ಜಿ ಸಲ್ಲಿಸಿದ್ದು ಅದು ಆರ್ಬಿಐ ಪರಿಶೀಲನೆಯಲ್ಲಿದೆ. ಮೆಹ್ಲಿ ಮಿಸ್ತ್ರಿ ನೇತೃತ್ವದಲ್ಲಿ ನಾಲ್ಕು ಮಂದಿ ಟ್ರಸ್ಟಿಗಳು ಟಾಟಾ ಟ್ರಸ್ಟ್ಸ್ನಲ್ಲಿ ನೋಯಲ್ ಟಾಟಾ ಅವರ ನಾಯಕತ್ವದ ಮಹತ್ವವನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ ಎಂದು ಸಮೂಹದಲ್ಲಿ ಕೆಲವರು ಭಾವಿಸಿದ್ದಾರೆ. ಟಾಟಾ ಟ್ರಸ್ಟ್ಸ್ನ ಅಧ್ಯಕ್ಷ ನೋಯಲ್ ಟಾಟಾ, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಟಾಟಾ ಟ್ರಸ್ಟ್ಸ್ನ ಕೆಲವು ಟ್ರಸ್ಟಿಗಳು ಕೇಂದ್ರ ಸಂಪುಟದ ಸಚಿವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.