ADVERTISEMENT

ಪ್ರಶ್ನೋತ್ತರ: ನಷ್ಟದಿಂದ ಆದಾಯ ತೆರಿಗೆ ವಿವರ ಸಲ್ಲಿಸಿಲ್ಲ, ಮುಂದೇನು ಮಾಡಬೇಕು?

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 3 ಮೇ 2022, 18:40 IST
Last Updated 3 ಮೇ 2022, 18:40 IST
ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ   

ಹೆಸರು ಬೇಡ,ಬೆಂಗಳೂರು

lಪ್ರಶ್ನೆ: ನಾನು ಎರಡು–ಮೂರು ವರ್ಷಗಳಿಂದ ಸಣ್ಣ ವ್ಯಾಪಾರ ನಡೆಸುತ್ತಿದ್ದೇನೆ. ಕೊರೊನಾ ಅವಧಿಯಲ್ಲಿ ನನ್ನ ವ್ಯವಹಾರದಲ್ಲಿ ನಷ್ಟ ಆಯಿತು. ಹೀಗಾಗಿ ನಾನು ಆದಾಯ ತೆರಿಗೆ ವಿವರ ಸಲ್ಲಿಸಲು ಮಹತ್ವ ನೀಡಲಿಲ್ಲ. ಇದರಿಂದ ಮುಂದೆ ನನಗೇನಾದರೂ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದೇ? ಈಗ ನಾನು ಹಿಂದಿನ ವರ್ಷಗಳ ತೆರಿಗೆ ವಿವರ ಸಲ್ಲಿಸಲು ಅವಕಾಶವಿದೆಯೇ?

ಉತ್ತರ: ಕೊರೊನಾ ಅವಧಿಯು ಬಹುತೇಕ ಎಲ್ಲ ವ್ಯಾಪಾರ ವ್ಯವಹಾರಗಳನ್ನು ಬಾಧಿಸಿದೆ. ಇದರ ಪರಿಣಾಮ ಮನಗಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಪರಿಧಿಯಲ್ಲಿ ಯಾವೆಲ್ಲ ರಿಯಾಯಿತಿಗಳನ್ನು ಜನಸಾಮಾನ್ಯರಿಗೆ ಹಾಗೂ ತೆರಿಗೆ ಪಾವತಿದಾರರಿಗೆ ನೀಡಲು ಸಾಧ್ಯವೋ ಅವೆಲ್ಲವನ್ನೂ ನೀಡಿವೆ. ಕೊರೊನಾ ಆವರಿಸಿದ ನಂತರದ ಎರಡು ವರ್ಷಗಳಲ್ಲಿ ತೆರಿಗೆ ವಿವರ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ನೀಡಲಾಗಿತ್ತು. ಇಂತಹ ಅವಕಾಶಗಳನ್ನು ಉಪಯೋಗಿಸಿಕೊಳ್ಳದಿದ್ದರೆ ಪರಿಣಾಮ ದುಬಾರಿ ಆಗುತ್ತದೆ.

ADVERTISEMENT

ಇದು ಅನೇಕ ಬಾರಿ ದಂಡ ಪಾವತಿಯಲ್ಲಿ ಕೊನೆಗೊಳ್ಳುತ್ತದೆ. ನೋಟಿಸ್ ಜಾರಿ ಮಾಡುವುದಕ್ಕೂ ಅವಕಾಶಗಳಿವೆ. ಯಾವುದೇ ವ್ಯಾಪಾರ, ವ್ಯವಹಾರ ನಡೆಸುವವರು ಸರಿಯಾದ ಸಮಯದಲ್ಲಿ ತೆರಿಗೆ ವಿವರ ಸಲ್ಲಿಸದಿದ್ದರೆ, ನಷ್ಟವಾದ ಸಂದರ್ಭದಲ್ಲಿ ಅಂತಹ ನಷ್ಟವನ್ನು ಮುಂದೆ ಗಳಿಸುವ ಲಾಭದೊಡನೆ ವಜಾಮಾಡುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಈ ಕಾರಣದಿಂದ ವ್ಯಾಪಾರ, ವ್ಯವಹಾರ ಮಾಡುವವರು ತೆರಿಗೆ ವಿಚಾರದಲ್ಲಿ ಜವಾಬ್ದಾರಿಯುತವಾಗಿರುವ ಅಗತ್ಯವಿದೆ. ಆಗುವ ನಷ್ಟವನ್ನು ತಡೆಯಲು ಸಾಧ್ಯವಿಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ತೆರಿಗೆ ವಿವರ ಸಲ್ಲಿಸುವ ಮೂಲಕ ನಷ್ಟದಲ್ಲೂ ತುಸು ನಿರಾಳವಾಗಿರಬಹುದು, ಮುಂಬರುವ ವರ್ಷಗಳಲ್ಲಿ ನಷ್ಟವನ್ನು ವಜಾಮಾಡುವ ಸಾಧ್ಯತೆಯೂ ಇದೆ.

ನೀವು ಕಾಲಮಿತಿ ಕಳೆದಿರುವ ವಿವರಗಳನ್ನು ಸಲ್ಲಿಸಲು ಈಗ ಅವಕಾಶವಿಲ್ಲ. ಒಂದು ವೇಳೆ ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಯಾವುದೇ ನೋಟಿಸ್ ಬಂದಲ್ಲಿ ಅದಕ್ಕೆ ಕಾನೂನಿನ ಅನ್ವಯ ಪ್ರತ್ಯೇಕವಾಗಿ ಉತ್ತರಿಸಬೇಕಾಗುತ್ತದೆ ಹಾಗೂ ಆ ಸಂದರ್ಭದಲ್ಲಷ್ಟೇ ಯೋಚಿಸಿದರಾಯ್ತು. ಮುಂದಿನ ವರ್ಷಗಳಲ್ಲಿ ಜುಲೈ 31ರೊಳಗೆ ತೆರಿಗೆ ವಿವರ ಸಲ್ಲಿಸುವ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿ. ಅದರ ಬಗ್ಗೆ ಪರಿಣತರ ಸಲಹೆಗಳನ್ನು ಪಡೆಯಿರಿ.

ಚಂದನ್ ಕುಮಾರ್

lಪ್ರಶ್ನೆ: ನಾನು ರಾಜ್ಯ ಸರ್ಕಾರದ ನೌಕರ. ನನ್ನ ಒಟ್ಟು ವೇತನ ₹ 35,600. ಕಡಿತಗಳು: ಪಿ.ಟಿ. ₹ 200, ಇಜಿಐಎಸ್ ₹ 240, ಎಲ್ಐಸಿ ₹ 844, ಎನ್‌ಪಿಎಸ್ ₹ 3,063, ಕೆಜಿಐಡಿ ₹ 3,200, ಇತರ ₹ 110. ಒಟ್ಟು ₹ 7,657. ನಿವ್ವಳ ವೇತನ ₹ 27,338. ನನಗೆ ಉಳಿತಾಯ ಮಾಡಲು ಕೆಜಿಐಡಿ, ಪಿಎಲ್‌ಐ, ಆರ್.ಡಿ. ಅಥವಾ ಬೇರೆ ಯಾವ ಯೋಜನೆ ಉತ್ತಮ ಎಂದು ತಿಳಿಸಿ. ನಿಮ್ಮ ಸಲಹೆ ನಮಗೆ ತುಂಬಾ ಸಹಕಾರಿ.

ಉತ್ತರ: ನೀವು ಸರ್ಕಾರಿ ಸೇವೆಯಲ್ಲಿರುವುದರಿಂದ ಕೆಲವೆಲ್ಲ ಉಳಿತಾಯಗಳನ್ನು ಕಡ್ಡಾಯವಾಗಿ ಮಾಡಬೇಕಾಗಿರುತ್ತದೆ. ಇವನ್ನು ನಿಮ್ಮ ವೇತನ ಪಾವತಿಯ ಸಂದರ್ಭದಲ್ಲಿ ಕಡಿತಗೊಳಿಸಲಾಗುತ್ತದೆ. ಈ ವರ್ಗದಲ್ಲಿ ಕರ್ನಾಟಕ ಸರ್ಕಾರಿ ನೌಕರರ ವಿಮಾ ಯೋಜನೆ, ಜೀವ ವಿಮಾ ಯೋಜನೆ ಇತ್ಯಾದಿ ಹೂಡಿಕೆಗಳೂ ಸೇರಿವೆ. ಪ್ರಸ್ತುತ ನಿಮ್ಮ ವೇತನದ ಶೇಕಡ 20ರಷ್ಟು ಮೊತ್ತ ಮೊದಲ ಹಂತದಲ್ಲೇ ಉಳಿತಾಯಕ್ಕೆ ಹೋಗುತ್ತಿದೆ.

ಹೆಚ್ಚುವರಿ ಉಳಿತಾಯಕ್ಕೆ ಯೋಜನೆ ಮಾಡುವ ಮುನ್ನ ನಿಮ್ಮ ದೈನಂದಿನ ಖರ್ಚು, ಮಾಸಿಕ ಖರ್ಚು ಇತ್ಯಾದಿಗಳ ಬಗ್ಗೆ ಖಚಿತ ಮಾಹಿತಿ ಹೊಂದಿದವರಾಗಿ. ಕೆಲವೆಲ್ಲ ಹೂಡಿಕೆಗಳು ಮಧ್ಯಮಾವಧಿ - ದೀರ್ಘಾವಧಿಗೆ ಆಗಬೇಕಾಗಿರುವ ಕಾರಣ, ಯಾವುದೇ ಹಣಕಾಸು ಸಮಸ್ಯೆ ಇದ್ದಕ್ಕಿದ್ದಂತೆ ಎದುರಾದಾಗ ಹಣ ಹಿಂದಕ್ಕೆ ಪಡೆಯುವುದು ಕಷ್ಟ. ಹೀಗಾಗಿ ಆ ನಿಟ್ಟಿನಲ್ಲೂ ಒಂದಿಷ್ಟು ಯೋಜನೆ ಅಗತ್ಯ. ಇನ್ನೂ ಒಂದು ಹಂತ ಮುಂದುವರಿದು, ಯಾವುದೇ ಖರ್ಚು–ವೆಚ್ಚ ಮಾಡುವ ಮುನ್ನ ಅಗತ್ಯ, ಅನಗತ್ಯ ಹಾಗೂ ಐಷಾರಾಮಿ ವರ್ಗಗಳ ಅಡಿ ಅವುಗಳನ್ನು ವಿಂಗಡಿಸಿ. ನಿಮ್ಮ ಅಗತ್ಯಗಳನ್ನು ಮನನ ಮಾಡಿಕೊಳ್ಳಿ. ಈ ರೀತಿ ಉಳಿತಾಯ ಮಾಡಿದ ಮೊತ್ತವನ್ನೂ ಹೂಡಿಕೆಗೆ ಬಳಸಿ.

ಹೆಚ್ಚಿನ ಹೂಡಿಕೆ ಮಾಡುವ ಮುನ್ನ ಅದರಿಂದ ನೀವು ಯಾವ ನಿರೀಕ್ಷೆ ಹೊಂದಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಉದಾಹರಣೆಗೆ, ಕೆಲವರು ತಮ್ಮ ಹೂಡಿಕೆಯ ಮೊತ್ತದ ಮೇಲೆ ಎದುರಾಗಬಹುದಾದ ಅಪಾಯಗಳನ್ನು ತಡೆಯುವ ಮನಸ್ಸು ಹೊಂದಿರುವುದಿಲ್ಲ. ಅಂತಹ ಸಂದರ್ಭದಲ್ಲಿ ವಾರ್ಷಿಕವಾಗಿ ಶೇ 5ರಿಂದ ಶೇ 8ರಷ್ಟು ಆದಾಯ ನೀಡುವ ನಿಖರು ಠೇವಣಿ, ಅಂಚೆ ಇಲಾಖೆಯ ಠೇವಣಿ, ಸರ್ಕಾರಿ ಬಾಂಡ್ ಇತ್ಯಾದಿಗಳಲ್ಲಷ್ಟೇ ಹೂಡಿಕೆ ಮಾಡಬಹುದು. ನೀವು ಈ ವರ್ಗದಲ್ಲಿದ್ದರೆ ಪ್ರಶ್ನೆಯಲ್ಲಿ ನೀವು ಉಲ್ಲೀಖಿಸಿದಂತೆ ಅಂಚೆ ಕಚೇರಿಯ ಅಂಚೆ ವಿಮಾ ಯೋಜನೆಯಲ್ಲಿ ಹಣ ಹೂಡಬಹುದು. ಅಂಚೆ ಕಚೇರಿಯ ಇತರ ಉಳಿತಾಯ ಯೋಜನೆಗಳಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ರೆಕರಿಂಗ್ ಡೆಪಾಸಿಟ್‌ಗಳಲ್ಲೂ ಹೂಡಿಕೆ ಮಾಡಬಹುದು. ಇಂದು ಅನೇಕ ಬ್ಯಾಂಕುಗಳು ಇದೇ ರೀತಿಯ ಹೂಡಿಕೆ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳ ಪ್ರಯೋಜನ ಪಡೆಯಬಹುದು. ನೀವು ಇನ್ನಷ್ಟು ಮಾರುಕಟ್ಟೆ ಅಪಾಯಗಳನ್ನು ನಿಭಾಯಿಸುವ ಶಕ್ತಿ ಉಳ್ಳವರಾಗಿದ್ದರೆ ಹಾಗೂ ಆ ಬಗ್ಗೆ ಅರಿತು ಹೂಡಿಕೆ ಮಾಡುವ ಮನಸ್ಸು ಹೊಂದಿದ್ದರೆ ಕ್ರಮೇಣ ಮ್ಯೂಚುವಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯಲ್ಲಿ ನಿಯಮಿತವಾಗಿ ಹೂಡಿಕೆ ಮಾಡಿ, ನಿಮ್ಮ ಬಂಡವಾಳವನ್ನು ವೃದ್ಧಿ ಮಾಡಿಕೊಳ್ಳಬಹುದು. ಆ ಬಗ್ಗೆ ನೈಪುಣ್ಯತೆ ಪಡೆಯುವುದು ಮುಖ್ಯ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.