ಮುಂಬೈ: ವಿಮಾನಗಳ ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್ವೇಸ್ ಸ್ವಾಧೀನಪಡಿಸಿಕೊಳ್ಳಲು ಮುಂದಾಗಬೇಕು ಎಂದು ಬ್ಯಾಂಕ್ ಉದ್ಯೋಗಿಗಳ ಸಂಘವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
22 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಹಿತ ರಕ್ಷಿಸಲು ಸರ್ಕಾರ ಈ ನಿರ್ಧಾರಕ್ಕೆ ಬರಬೇಕು ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ಹಣಕಾಸಿನ ಮುಗ್ಗಟ್ಟಿನ ಭಾರಕ್ಕೆ ಕುಸಿದಿರುವ ವಿಮಾನಯಾನ ಸಂಸ್ಥೆಗೆ ಬ್ಯಾಂಕ್ಗಳು ಸಾಲ ನೀಡದಂತೆ ನೋಡಿಕೊಳ್ಳಬೇಕು ಎಂದೂ ಪತ್ರದಲ್ಲಿ ಮನವಿ ಮಾಡಲಾಗಿದೆ.
ಸಂಸ್ಥೆಯಲ್ಲಿನ ಪಾಲು ಬಂಡವಾಳ ಮಾರಾಟ ಮಾಡಲು ಬ್ಯಾಂಕ್ ಒಕ್ಕೂಟ ಬಿಡ್ ಆಹ್ವಾನಿಸಿದೆ. ಈ ಪ್ರಕ್ರಿಯೆ ಯಶಸ್ವಿಯಾಗದಿದ್ದರೆ ಸರ್ಕಾರವೇ ಸಂಸ್ಥೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಬ್ಯಾಂಕ್ಗಳು ಸಂಸ್ಥೆಗೆ ಇನ್ನಷ್ಟು ಸಾಲ ನೀಡುವ ಯಾವುದೇ ಪ್ರಯತ್ನಕ್ಕೆ ತಮ್ಮ ವಿರೋಧ ಇದೆ ಎಂದೂ ಸಂಘವು ಸ್ಪಷ್ಟಪಡಿಸಿದೆ.
ಸ್ಥಾಪಕ ನರೇಶ್ ಗೋಯಲ್ ಅವರು ಈಗಲೂ ಸಂಸ್ಥೆಯಲ್ಲಿ ಶೇ51ರಷ್ಟು ಪಾಲು ಬಂಡವಾಳ ಹೊಂದಿದ್ದಾರೆ. ಸಂಸ್ಥೆಯನ್ನು ಪುನರಾರರಂಭ ಮಾಡುವುದು ಅಥವಾ ಬೇರೊಬ್ಬರಿಗೆ ಮಾರಾಟ ಮಾಡುವುದು ಅವರ ತಲೆನೋವಿನ ವಿಷಯವಾಗಿದೆ. ಇಡೀ ಬಿಕ್ಕಟ್ಟಿನ ಬಗ್ಗೆ ಗೋಯಲ್ ಅವರೊಬ್ಬರೇ ಉತ್ತರ ನೀಡಬಲ್ಲವರಾಗಿದ್ದಾರೆ ಎಂದೂ ಸಂಘ ಅಭಿಪ್ರಾಯಪಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.