ಮುಂಬೈ: ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ವಿಮಾನ ಯಾನ ಸಂಸ್ಥೆ ಜೆಟ್ ಏರ್ವೇಸ್ನ ಪಾಲು ಬಂಡವಾಳ ಮಾರಾಟದ ಹರಾಜು ಪ್ರಕ್ರಿಯೆಯು ಸೋಮವಾರ ಆರಂಭಗೊಳ್ಳುವ ನಿರೀಕ್ಷೆ ಇದೆ.
ಸಾಲ ಮರು ಹೊಂದಾಣಿಕೆ ಯೋಜನೆಯಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೇತೃತ್ವದಲ್ಲಿನ 26 ಬ್ಯಾಂಕ್ಗಳ ಒಕ್ಕೂಟವು ಈ ಪೂರ್ಣ ಪ್ರಮಾಣದ ವಿಮಾನ ಯಾನ ಸಂಸ್ಥೆಯ ಆಡಳಿತ ಮಂಡಳಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಸಂಸ್ಥೆಯು
₹ 8 ಸಾವಿರ ಕೋಟಿಗಳಷ್ಟು ಸಾಲ ಬಾಕಿ ಉಳಿಸಿಕೊಂಡಿದೆ.
ಶನಿವಾರವೇ ಈ ಹರಾಜು ಪ್ರಕ್ರಿಯೆಗೆ ಚಾಲನೆ ಸಿಗಬೇಕಾಗಿತ್ತು. ಹರಾಜು ಪ್ರಕ್ರಿಯೆಯ ದಾಖಲೆಗಳಿಗೆ ಇನ್ನೂ ಅಂತಿಮ ಸ್ವರೂಪ ನೀಡದ ಕಾರಣಕ್ಕೆ ಮುಂದೂಡಲಾಗಿದೆ. ಬಂಡವಾಳ ಖರೀದಿಸುವ ಇಂಗಿತ ವ್ಯಕ್ತಪಡಿಸುವ ದಾಖಲೆಗಳನ್ನು ಸೋಮವಾರ ನೀಡಲಾಗುವುದು. ಬಿಡ್ ಸಲ್ಲಿಸಲು ಈ ಮೊದಲು ನಿಗದಿಯಾಗಿದ್ದ ಏ. 9ರ ಗಡುವನ್ನು ಈಗ ಏ. 10ಕ್ಕೆ ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
₹ 1,500 ಕೋಟಿಗಳ ನೆರವು ನೀಡಿ ಸಂಸ್ಥೆಯಲ್ಲಿ ಶೇ 51ರಷ್ಟು ಪಾಲು ಬಂಡವಾಳ ಹೊಂದಲಿರುವ ಎಸ್ಬಿಐ ನೇತೃತ್ವದಲ್ಲಿನ ಬ್ಯಾಂಕ್ ಒಕ್ಕೂಟವು, ವಿಮಾನಯಾನ ಸಂಸ್ಥೆಯನ್ನು ಬೇರೆಯವರಿಗೆ ಮಾರಾಟ ಮಾಡಲು ಉದ್ದೇಶಿಸಿವೆ. ಪರಿಹಾರ ಯೋಜನೆ ಅನ್ವಯ, ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷ ನರೇಶ್ ಗೋಯಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.