ADVERTISEMENT

ಬಿಸಿಸಿಐ ಅರ್ಜಿ: ವಾರದೊಳಗೆ ನಿರ್ಧರಿಸಿ- NCLAT

ಬೈಜುಸ್‌ನಿಂದ ₹158 ಕೋಟಿ ಬಾಕಿ ಪ್ರಕರಣ

ಪಿಟಿಐ
Published 9 ಫೆಬ್ರುವರಿ 2025, 14:49 IST
Last Updated 9 ಫೆಬ್ರುವರಿ 2025, 14:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹಣಕಾಸಿನ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸಲ್ಲಿಸಿರುವ ಅರ್ಜಿಯ ಬಗ್ಗೆ ಒಂದು ವಾರದೊಳಗೆ ನಿರ್ಧರಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ), ಚೆನ್ನೈನ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ಸೂಚಿಸಿದೆ.

ಭಾರತದ ಕ್ರಿಕೆಟ್‌ ತಂಡದ ಪ್ರಾಯೋಜಕತ್ವ ಸಂಬಂಧ ಬೈಜುಸ್‌ ಕಂಪನಿಯು ₹158 ಕೋಟಿಯನ್ನು ಬಿಸಿಸಿಐಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಬೈಜುಸ್‌ ಈ ಬಾಕಿ ಮೊತ್ತ ಪಾವತಿಸುವ ಬಗ್ಗೆ ಒಪ್ಪಿಗೆ ನೀಡಿರುವುದರಿಂದ, ಕಾರ್ಪೊರೇಟ್‌ ದಿವಾಳಿ ಗೊತ್ತುವಳಿ ಪ್ರಕ್ರಿಯೆಯನ್ನು (ಸಿಐಆರ್‌ಪಿ) ಹಿಂಪಡೆಯಲು ಬಿಸಿಸಿಐ ಮುಂದಾಗಿದೆ.

ಬೈಜುಸ್‌ಗೆ ಅಮೆರಿಕ ಮೂಲದ ಗ್ಲಾಸ್‌ ಟ್ರಸ್ಟ್‌ ಕಂಪನಿ ಮತ್ತು ಆದಿತ್ಯ ಬಿರ್ಲಾ ಫೈನಾನ್ಸ್‌ ಕೂಡ ಸಾಲ ನೀಡಿವೆ. ಆದರೆ, ದಿವಾಳಿ ಪರಿಹಾರ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಲು ರಚಿಸಲಾದ ಸಾಲದ ಸಮಿತಿಯಿಂದ ಈ ಎರಡು ಕಂಪನಿಗಳನ್ನು ಹೊರಗಿಡಲಾಗಿತ್ತು. 

ADVERTISEMENT

ಬೈಜುಸ್‌ನ ಪರಿಹಾರ ಅಧಿಕಾರಿಯಾಗಿದ್ದ ಪಂಕಜ್‌ ಶ್ರೀವಾಸ್ತವ ಅವರು ಈ ನಿರ್ಧಾರ ಕೈಗೊಂಡಿದ್ದರು. ಇದಕ್ಕೆ ಎನ್‌ಸಿಎಲ್‌ಟಿ ಬೆಂಗಳೂರು ಶಾಖೆಯ ಆಕ್ಷೇಪ ವ್ಯಕ್ತಪಡಿಸಿತ್ತು. ನಂತರ ಸಾಲಗಾರರ ಸಮಿತಿಯಲ್ಲಿ ಈ ಎರಡೂ ಕಂಪನಿಗಳನ್ನು ಸೇರ್ಪಡೆಗೊಳಿಸಿ ಜನವರಿ 29ರಂದು ಆದೇಶ ಹೊರಡಿಸಿತ್ತು. ಅಲ್ಲದೆ, ಪಂಕಜ್‌ ವಿರುದ್ಧ ತನಿಖೆ ನಡೆಸುವಂತೆ ಹಣಕಾಸು ನಷ್ಟ ಮತ್ತು ದಿವಾಳಿ ಮಂಡಳಿಗೆ (ಐಬಿಬಿಐ) ಸೂಚಿಸಿತ್ತು. 

ಈ ಆದೇಶ ಪ್ರಶ್ನಿಸಿ ಬೈಜು ರವೀಂದ್ರನ್ ಅವರ ಸಹೋದರ ಹಾಗೂ ಬೈಜುಸ್‌ನ ಮಾಜಿ ಪ್ರವರ್ತಕ ರಿಜು ರವೀಂದ್ರನ್‌ ಅವರು, ಎನ್‌ಸಿಎಲ್‌ಎಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ನ್ಯಾಯಾಧೀಶರಾದ ರಾಕೇಶ್‌ ಕುಮಾರ್‌ ಜೈನ್‌ ಮತ್ತು ಜತೀಂದ್ರನಾಥ್ ಸ್ವೈನ್ ಈ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಈ ಮೇಲ್ಮನವಿ ಅರ್ಜಿಯನ್ನು ಅವಲೋಕನ ಮಾಡುವಾಗ ಪ್ರಕರಣದ ವಾಸ್ತವಾಂಶಗಳ ಬಗ್ಗೆ ಪೀಠವು ಯಾವುದೇ ಅವಲೋಕನ ನಡೆಸಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.